Publish Date: Wed, 16 Feb 2022 (07:35 IST)
Updated Date: Wed, 16 Feb 2022 (08:39 IST)
ಬೆಂಗಳೂರು : ಚಂದ್ರಾ ಲೇಔಟ್ ವಿದ್ಯಾಸಾಗರ್ ಶಾಲೆಯ ಶಿಕ್ಷಕಿ ಶಶಿಕಲಾ ಅವರಿಗೆ ಬೇರೆ ಕಡೆ ಉದ್ಯೋಗ ನೀಡುವ ಬಗ್ಗೆ ಮಾತನಾಡಿದ್ದೇನೆ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಪ್ರಕಟಿಸಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನ ಒಂದು ಖಾಸಗಿ ಶಾಲೆಯಲ್ಲಿ ಓರ್ವ ಯುವಶಿಕ್ಷಕಿ ತಾನು ಮಾಡದಿರುವ ಕೃತ್ಯಕ್ಕೆ ಶಿಕ್ಷೆ ಅನುಭವಿಸುವ ಘಟನೆ ನಡೆಯಿತು. ಆ ಶಾಲೆಯ ಮಕ್ಕಳ ಪೋಷಕರಲ್ಲದ ನೂರಾರು ಮಂದಿ ಶಾಲೆಯ ಮುಂದೆ ಜಮಾಯಿಸಿ ಆಧಾರರಹಿತ ಗಲಾಟೆ ಮಾಡಿದ್ದರು. ಸುಳ್ಳು ವದಂತಿ ಹಬ್ಬಿಸಿ ಈ ಗಲಾಟೆ ಮಾಡಲಾಗಿತ್ತು.
ಆಕೆಯ ಅಪ್ಪ, ಅಮ್ಮನ ಅಳಲು ಆಲಿಸಿದ ನನಗೆ ಬೇಸರವಾಯಿತು. ವಿನಾಕಾರಣ ಗಲಾಟೆ ಮಾಡಿ ಈ ಶಿಕ್ಷಕಿಯ ಕುಟುಂಬದ ಅನ್ನ ಕಸಿದುಕೊಂಡ ಆ ಗುಂಪಿನ ಬಗ್ಗೆ ತೀವ್ರ ತಿರಸ್ಕಾರ ಮೂಡಿತು. ಈಗ ಶಿಕ್ಷಕಿ ರಾಜೀನಾಮೆ ಕೊಟ್ಟಿದ್ದಾರೆ. ಬದಲಿ ಶಿಕ್ಷಕಿ ಸದ್ಯಕ್ಕಂತೂ ಇಲ್ಲ.
ಆ ಕುಟುಂಬದ ಜೊತೆ ಸುಮಾರು ಹೊತ್ತು ಮಾತನಾಡಿ ಒಂದಷ್ಟು ಧೈರ್ಯ ತುಂಬಿ ಬಂದಿದ್ದೇನೆ. ಶಾಲೆಯ ಮುಖ್ಯಸ್ಥರೊಂದಿಗೆ ಮಾತನಾಡಿ ಶಿಕ್ಷಕಿಗೆ ಅಗತ್ಯ ಆರ್ಥಿಕ ಸಹಾಯ ನೀಡುವಂತೆ ಕೇಳಿದ್ದೇನೆ.
ಅವರೂ ಪೂರಕವಾಗಿ ಸ್ಪಂದಿಸಿದ್ದಾರೆ. ಶಿಕ್ಷಕಿಗೆ ಬೇರೆಡೆ ಉದ್ಯೋಗ ಕೊಡಿಸುವ ಬಗ್ಗೆಯೂ ಮಾತನಾಡಿದ್ದೇನೆ. ತಪ್ಪು ಗ್ರಹಿಕೆ ಹಾಗೂ ಸಮೂಹಸನ್ನಿ ಯಿಂದ ಅಮಾಯಕರ ಜೀವನ ಹೇಗೆ ಸಂಪೂರ್ಣ ನಲುಗಿ ಹೋಗುತ್ತದೆ ಎಂಬುದಕ್ಕೆ ಈ ಶಿಕ್ಷಕಿಯ ಕುಟುಂಬವೇ ಸಾಕ್ಷಿ.