Publish Date: Wed, 16 Feb 2022 (07:25 IST)
Updated Date: Wed, 16 Feb 2022 (08:28 IST)
ಬೆಂಗಳೂರು : ಅನೈತಿಕ ಸರ್ಕಾರ ಅನ್ನೋದೊಂದೇ ಒಂದು ಪದ ಇವತ್ತು ಪರಿಷತ್ ಕಲಾಪದಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಗದ್ದಲ ಗಲಾಟೆಗೆ ಸಾಕ್ಷಿ ಆಯಿತು.
ಪರಸ್ಪರ ಮಾತಿನ ಚಕಮಕಿ ನಡೆದು ಸದಸ್ಯರ ನಡುವೆ ಕಿತ್ತಾಟಕ್ಕೆ ಕಾರಣವಾಯಿತು. ರಾಜ್ಯಪಾಲರ ಭಾಷಣದ ಮೇಲೆ ಕಾಂಗ್ರೆಸ್ನ ಯುಬಿ ವೆಂಕಟೇಶ್ ಭಾಷಣ ಮಾಡುತ್ತಿದ್ದರು.
ಈ ವೇಳೆ ಯುಬಿ ವೆಂಕಟೇಶ್, ಈ ಸರ್ಕಾರ ಅನೈತಿಕವಾಗಿ ಬಂದಿರೋ ಸರ್ಕಾರ ಅಂತ ವಾಗ್ದಾಳಿ ನಡೆಸಿದರು. ಇದಕ್ಕೆ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.
ಅನೈತಿಕ ಸರ್ಕಾರ ಅಂದರೆ ಏನು ಕುಮಾರಸ್ವಾಮಿ- ಕಾಂಗ್ರೆಸ್ ಮಾಡಿದ್ದು ಯಾವ ಸರ್ಕಾರ ಎಂದು ನಾರಾಯಣಸ್ವಾಮಿ ಯುಬಿ ವೆಂಕಟೇಶ್ ವಿರುದ್ದ ತಿರುಗಿ ಬಿದ್ದರು. ಈ ವೇಳೆ ಸದನದಲ್ಲಿ ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತ್ತು.
ಕಾಂಗ್ರೆಸ್ ಅವ್ರು ಅನೈತಿಕ ಸರ್ಕಾರ ಮಾಡಿದ್ದು, ಅಂತ ಬಿಜೆಪಿ ಸದಸ್ಯರು ಆಕ್ರೋಶ ಹೊರ ಹಾಕಿದರು. ಅನೈತಿಕ ಸರ್ಕಾರ ಅನ್ನೋ ಪದ ಕಡತದಿಂದ ತೆಗೆಯುವಂತೆ ಬಿಜೆಪಿ ಸದಸ್ಯರು ಒತ್ತಾಯ ಮಾಡಿದರು. ಆದರೆ ಅನೈತಿಕ ಸರ್ಕಾರ ಅನ್ನೋದು ಅಸಂವಿಧಾನಿಕ ಪದ ಅಲ್ಲ ಅಂತ ಸಭಾಪತಿ ಸ್ಥಾನದಲ್ಲಿ ಇದ್ದ ಶ್ರೀಕಂಠೇಗೌಡ ತಿಳಿಸಿದರು.