Publish Date: Fri, 03 Oct 2025 (10:24 IST)
Updated Date: Fri, 03 Oct 2025 (10:26 IST)
ಬೆಂಗಳೂರು: ನಾಡಹಬ್ಬ ದಸರಾ ಆಚರಣೆಯಲ್ಲೂ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರವೆಸಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಆರೋಪದ ಜೊತೆಗೆ ಸರಣಿ ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ. ದಸರಾ ಟಿಕೆಟ್ ಗಳನ್ನು ಬ್ಲಾಕ್ ನಲ್ಲಿ ಮಾರಾಟ ಮಾಡಲಾಗಿದೆ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿರುವ ಅವರು ಪ್ರವೇಶ ನೀಡಲು ಸಾಧ್ಯವಾಗದ ಮೇಲೆ 6,500 ರೂ. ಪಡೆದು ಗೋಲ್ಡ್ ಕಾರ್ಡ್ ವಿತರಿಸಿದ್ದು ಯಾಕೆ? ಲಭ್ಯವಿರುವ ಸ್ಥಳಾವಕಾಶಕ್ಕಿಂತ ಹೆಚ್ಚು ಗೋಲ್ಡ್ ಕಾರ್ಡ್ ಮಾರಾಟ ಮಾಡುವ ನಿರ್ಧಾರ ಯಾರದ್ದು? ಇದರ ಯೋಜನೆ, ನಿರ್ವಹಣೆಯ ಜವಾಬ್ದಾರಿ ಯಾರದ್ದು? ಎಂದು ಪ್ರಶ್ನೆ ಮಾಡಿದ್ದಾರೆ.
ನಾಡಹಬ್ಬ ದಸರಾ ಆಚರಣೆಯಲ್ಲೂ ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆ, ಅವ್ಯವಹಾರ! ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ವೀಕ್ಷಣೆಗೆ ಸಾವಿರಾರು ರೂಪಾಯಿ ಕೊಟ್ಟು ಗೋಲ್ಡ್ ಕಾರ್ಡ್, ವಿಐಪಿ ಟಿಕೆಟ್ ಪಡೆದಿದ್ದರೂ ಒಳಗೆ ಪ್ರವೇಶ ಸಿಗದೇ ಪ್ರವಾಸಿಗರು ಪರದಾಡಿರುವ ಘಟನೆ, ಕಾಂಗ್ರೆಸ್ ಸರ್ಕಾರ ನಾಡಹಬ್ಬ ದಸರಾ ಆಚರಣೆಯ ಬಗ್ಗೆ ಎಷ್ಟು ನಿರ್ಲಕ್ಷ್ಯ, ಅಸಡ್ಡೆ ತೋರಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ.
ಟಿಕೆಟ್ ಪಡೆದ ಮೇಲೂ ಪ್ರವೇಶ ಸಿಗದ ಪ್ರವಾಸಿಗರಲ್ಲಿ, ಜನಸಾಮಾನ್ಯರಲ್ಲಿ ಕ್ಷಮೆ ಕೇಳಬೇಕು. ಅವರ ಟಿಕೆಟ್ ಹಣ ಹಿಂತಿರುಗಿಸಬೇಕು ಎಂದಿದ್ದಾರೆ.