ಬೆಂಗಳೂರು: ಕೇಂದ್ರ ಸರ್ಕಾರ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿರುವ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಆರ್ ಅಶೋಕ್ ಅದೇನೂ ಹೆಚ್ಚಲ್ಲ ಬಿಡ್ರೀ ಎಂದಿದ್ದಾರೆ.
ಕೇಂದ್ರ ಸರ್ಕಾರ ಇಂದಿನಿಂದಲೇ ಜಾರಿಯಾಗುವಂತೆ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 50 ರೂ.ಗೆ ಏರಿಕೆ ಮಾಡಿದೆ. ಇದರ ಬಗ್ಗೆ ಇಂದು ಮಾಧ್ಯಮಗಳು ಆರ್ ಅಶೋಕ್ ರನ್ನು ಪ್ರಶ್ನೆ ಮಾಡಿದೆ. ಆಗ ಇದೇನೂ ಹೆಚ್ಚಾಗಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಗೆ ಕರ್ನಾಟಕ ಒಂದು ಎಟಿಎಂ. ಇದಕ್ಕಾಗಿ ರಾಜ್ಯದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಜನರ ದರೋಡೆ ಮಾಡ್ತಿದ್ದಾರೆ ಎಂದರು. ಆಗ ಮಾಧ್ಯಮ ಪ್ರತಿನಿಧಿಯೊಬ್ಬರು ನೀವು ಒಂದೆಡೆ ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ ಹೋರಾಟ ಮಾಡುತ್ತಿದ್ದೀರಿ. ಆದರೆ ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆಯನ್ನು 50 ರೂ.ಗೆ ಏರಿಸಿರುವುದು ನಿಮಗೆ ಹಿನ್ನಡೆಯಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಅವರು ಎಲ್ ಪಿಜಿ ಸಿಲಿಂಡರ್ ದರ 50 ರೂ. ಏರಿಕೆ ಮಾಡಿರುವುದು ಅಂಥಾ ದೊಡ್ಡ ಹೊರೆಯೇನೂ ಆಗಲ್ಲ. ಯಾಕೆಂದರೆ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಸಬ್ಸಿಡಿ ಕೊಡ್ತಿದೆ. ಹೀಗಾಗಿ ಜನರಿಗೆ ಹೊರೆ ಆಗಲ್ಲ. ಮೋದಿ ಸರ್ಕಾರ ಜನರಿಗೆ ಎಷ್ಟು ಹೊರೆ ಕಡಿಮೆ ಮಾಡಬಹುದೋ ಅಷ್ಟು ನೋಡಿಕೊಂಡು ಏರಿಕೆ ಮಾಡಿದ್ದಾರೆ ಎಂದಿದ್ದಾರೆ.