Publish Date: Wed, 24 Sep 2025 (14:13 IST)
Updated Date: Wed, 24 Sep 2025 (14:15 IST)
ಬೆಂಗಳೂರು: ರಾಜ್ಯಾದ್ಯಂತ ರಸ್ತೆ ಗುಂಡಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಗೆ ಟಾಂಗ್ ಕೊಟ್ಟಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಾವೇ ಗುಂಡಿ ತೋಡಿ ತಾವೇ ಮುಚ್ಚುತ್ತಿದ್ದಾರೆ ಎಂದಿದ್ದಾರೆ.
ಇಂದು ಬೆಂಗಳೂರಿನಲ್ಲಿ ಅನೇಕ ಕಡೆ ಬಿಜೆಪಿ ನಾಯಕರು ರಸ್ತೆ ಗುಂಡಿ ಮುಚ್ಚುವ ಮೂಲಕ ಮತ್ತು ರಸ್ತೆ ತಡೆ ನಡೆಸುವ ಮೂಲಕ ರಸ್ತೆ ಗುಂಡಿ ವಿರುದ್ಧ ಸಾಂಕೇತಿಕವಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಇದರ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈ ರಸ್ತೆ ಗುಂಡಿಗಳೆಲ್ಲಾ ಯಾರ ಕಾಲದಲ್ಲಿ ಆಗಿತ್ತು ಹೇಳಿ? ಕಳಪೆ ಕಾಮಗಾರಿ ಮಾಡಿದರೆ ಬೇಗ ಗುಂಡಿ ಬೀಳುತ್ತದೆ. ನಮ್ಮ ಸರ್ಕಾರ ಪ್ರತಿನಿತ್ಯ 1000 ಗುಂಡಿ ಮುಚ್ಚುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಈಗ ತಾವೇ ಗುಂಡಿ ತೋಡಿ ಮುಚ್ಚುವ ನಾಟಕವಾಡುತ್ತಿದ್ದಾರೆ ಎಂದಿದ್ದಾರೆ.
ಬಿಜೆಪಿಯವರು ದೆಹಲಿಯಲ್ಲಿ ಎಷ್ಟು ರಸ್ತೆ ಗುಂಡಿ ಇದೆ ನೋಡಲಿ. ಅಂಕಿ ಅಂಶಗಳ ಪ್ರಕಾರ ದೆಹಲಿಯಲ್ಲಿ ಇದಕ್ಕಿಂತ ಹೆಚ್ಚು ರಸ್ತೆ ಗುಂಡಿಗಳಿವೆ. ಅದರ ಬಗ್ಗೆ ಬಿಜೆಪಿಯವರು ಮಾತನಾಡಲಿ ನೋಡೋಣ ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.