ಯಲಹಂಕ : ರಸ್ತೆ ಗುಂಡಿಯ ವಿಷಯವನ್ನು ಸರಕಾರಕ್ಕೆ ಮನವರಿಕೆ ಮಾಡುವ ದೃಷ್ಟಿಯಿಂದ ಇಂದು ಬಿಜೆಪಿ ನಗರದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ರಸ್ತೆ ಗುಂಡಿ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ರಸ್ತೆ ತಡೆ ಮತ್ತು ಸಾಂಕೇತಿಕವಾಗಿ ರಸ್ತೆ ಗುಂಡಿ ಮುಚ್ಚುವ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಅದರಂತೆ ಇಂದು ಬೆಳಿಗ್ಗೆ ಯಲಹಂಕ ಹಳೆ ನಗರ, ಕೆಂಪೇಗೌಡ ವಾರ್ಡ್ ನಂ.01 ರಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾಟಾಚಾರಕ್ಕೆ, ಅವೈಜ್ಞಾನಿಕವಾಗಿ ಹಾಗೂ ಕಳಪೆ ಡಾಂಬರೀಕರಣ ಕೆಲಸ ಮಾಡಿದ್ದು, ಕ್ಷೇತ್ರದ ಎಲ್ಲಾ ರಸ್ತೆಗಳಲ್ಲೂ ಈಗಾಗಲೇ ಗುಂಡಿಗಳು ಬಿದ್ದಿದೆ, ಇದರಿಂದ ಸಾಕಷ್ಟು ರಸ್ತೆ ಅಪಘಾತಗಳು ಹಾಗೂ ಸಾವುಗಳು ಸಂಭವಿಸಿವೆ, ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ರಸ್ತೆ ತಡೆದು ಗುಂಡಿ ಮುಚ್ಚುವ ಅಭಿಯಾನ ವನ್ನು ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್.ಆರ್.ವಿಶ್ವನಾಥ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಾಂಕೇತಿಕವಾಗಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಸರಕಾರವು ಜನವಿರೋಧಿಯಾಗಿದ್ದು, ಆಡಳಿತದಲ್ಲಿ ವಿಫಲವಾಗಿದೆ. ಜನರನ್ನು ಬೆದರಿಸುವ ಸರಕಾರ ಇದೆಂದು ಟೀಕಿಸಿದ್ದರು.
ಅದರಂತೆ ಇಂದು ಬೆಳಿಗ್ಗೆ ಯಲಹಂಕದಲ್ಲಿ ಸ್ವತಃ ಶಾಸಕ ಎಸ್ ಆರ್ ವಿಶ್ವನಾಥ್ ಬಿಜೆಪಿ ಕಾರ್ಯಕರ್ತರೊಂದಿಗೆ ಸೇರಿಕೊಂಡು ಗುಂಡಿ ಮುಚ್ಚುವ ಕೆಲಸ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಇಂದು ನಗರದಾದ್ಯಂತ ಬಿಜೆಪಿ ನಾಯಕರು ಇದೇ ರೀತಿ ಪ್ರತಿಭಟನೆ ನಡೆಸಲಿದ್ದಾರೆ.