ಮೈಸೂರು: ಆಷಾಢ ಶುಕ್ರವಾರಕ್ಕೆ ಮೈಸೂರಿನಲ್ಲಿರುವ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆಯಲು ತೆರಳುವವರಿಗೆ ಹೊಸ ನಿಯಮ ಮಾಡಲಾಗಿದ್ದು ಇದನ್ನು ಸಾರ್ವಜನಿಕರು ತಪ್ಪದೇ ಗಮನಿಸಬೇಕು.
ಇದೇ ಶುಕ್ರವಾರದಿಂದ ಆಷಾಢ ಶುಕ್ರವಾರ ಶುರುವಾಗುತ್ತದೆ. ಈ ಹಿನ್ನಲೆಯಲ್ಲಿ ಚಾಮುಂಡಿ ದೇವತೆಗೆ ವಿಶೇಷ ಪೂಜೆಯಿರುತ್ತದೆ. ಆಷಾಢ ಶುಕ್ರವಾರ ಹಿನ್ನಲೆಯಲ್ಲಿ ಸಾಕಷ್ಟು ಜನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ಬೆಟ್ಟದಲ್ಲಿ ಜನಜಂಗುಳಿ ಸಾಮಾನ್ಯವಾಗಿರುತ್ತದೆ.
ಈ ಹಿನ್ನಲೆಯಲ್ಲಿ ಈ ಬಾರಿ ವಾರಂತ್ಯದಲ್ಲಿ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅದರ ಬದಲು ಸರ್ಕಾರವೇ ಬಸ್ ಆಯೋಜಿಸಿದೆ. ಅದರ ಲಾಭ ಪಡೆದುಕೊಳ್ಳಬಹುದು. 2,000 ರೂ. ಕೊಟ್ಟರೆ ಎಸಿ ಬಸ್ ನಲ್ಲಿ ಬೆಟ್ಟಕ್ಕೆ ಕರೆದೊಯ್ದು ದರ್ಶನ ಪಡೆದು ಬರಬಹುದಾಗಿದೆ.
ಇನ್ನು ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಖಾಸಗಿ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಹೀಗಾಗಿ ಮೈಸೂರಿಗೆ ಭೇಟಿ ನೀಡುವವರು ವಾರಂತ್ಯದಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳುವುದಿದ್ದರೆ ಈ ಪ್ರಕಟಣೆಯನ್ನು ಗಮನಿಸಿ.