ಬೆಂಗಳೂರು: ಬುರ್ಖಾ ಹಾಕಿಕೊಂಡು ಬಂದು ಆರ್ ಎಸ್ಎಸ್ ನವರು ಮೈಸೂರಿನಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಗೆ ತಾಕತ್ತಿದ್ದರೆ ಬುರ್ಖಾ ಬ್ಯಾನ್ ಮಾಡಿ ಎಂದು ಕೆಲವು ನೆಟ್ಟಿಗರು ಸವಾಲು ಹಾಕಿದ್ದಾರೆ.
ಸೋಷಿಯಲ್ ಮೀಡಿಯಾ ಪುಟದಲ್ಲಿ ಧರ್ಮಗುರುಗಳ ಬಗ್ಗೆ ಅವಹೇಳನಕಾರೀ ಪೋಸ್ಟ್ ಮಾಡಿದ್ದಾರೆಂಬ ಕಾರಣಕ್ಕೆ ಮೈಸೂರಿನಲ್ಲಿ ಇತ್ತೀಚೆಗೆ ಉದಯಗಿರಿ ಪೊಲೀಸ್ ಠಾಣೆ ಮೇಲೆ ಮುಸ್ಲಿಂ ಯುವಕರ ಗುಂಪು ದಾಳಿ ಮಾಡಿತ್ತು.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಕೆ ಹರಿಪ್ರಸಾದ್ ನಿನ್ನೆ ಈ ಗಲಾಟೆ ಮಾಡಿದವರು ಆರ್ ಎಸ್ಎಸ್ ನವರು. ಅವರೇ ಬುರ್ಖಾ ಹಾಕಿಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಮೊದಲು ಕಾಂಗ್ರೆಸ್ ನಾಯಕ ಎಂ ಲಕ್ಷ್ಮಣ್ ಕೂಡಾ ಆರ್ ಎಸ್ಎಸ್ ಮೇಲೆ ಆರೋಪ ಮಾಡಿದ್ದರು.
ಇದೀಗ ಬಿಕೆ ಹರಿಪ್ರಸಾದ್ ಆರೋಪಕ್ಕೆ ಕೆಲವರು ಹಾಗಿದ್ದರೆ ಬುರ್ಖಾವನ್ನೇ ನಿಷೇಧಿಸಿ ಎಂದಿದ್ದಾರೆ. ಇನ್ನು ಕೆಲವರು ಅಲ್ಲಿ ಬುರ್ಖಾ ಹಾಕಿಕೊಂಡು ಎಷ್ಟು ಜನ ಬಂದಿದ್ದರು ಎಂದು ಸರಿಯಾಗಿ ತನಿಖೆ ನಡೆಸಿ. ಅದು ಬಿಟ್ಟು ಮಾಧ್ಯಮಗಳ ಮುಂದೆ ಸುಮ್ಮನೇ ಆರೋಪ ಮಾಡುವುದಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.