Publish Date: Fri, 15 Nov 2024 (11:19 IST)
Updated Date: Fri, 15 Nov 2024 (11:21 IST)
ಬೆಂಗಳೂರು: ಮುಡಾ ಹಗರಣ ವಿಚಾರವಾಗಿ ಇಡಿ ತನಿಖೆ ಚುರುಕುಗೊಂಡಿದ್ದು, ಅಧಿಕಾರಗಳ ವಿಚಾರಣೆಯ ವೇಳೆ ಮತ್ತಿಬ್ಬರು ಸಚಿವರ ಹೆಸರುಗಳು ಬಯಲಿಗೆ ಬಂದಿವೆ ಎನ್ನಲಾಗುತ್ತಿದೆ.
ಮುಡಾದಲ್ಲಿ ಸಾವಿರಾರು ಕೋಟಿ ರೂ. ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಡಿ ತೀವ್ರ ವಿಚಾರಣೆ ನಡೆಸುತ್ತಿದೆ. ಸಿಎಂ ಸಿದ್ದರಾಮಯ್ಯ ಆಪ್ತರನ್ನು ಇಡಿ ತನಿಖೆಗೊಳಪಡಿಸಿದೆ. ಸಿಎಂ ಸಿದ್ದರಾಮಯ್ಯಗೂ ಸದ್ಯದಲ್ಲೇ ವಿಚಾರಣೆಗೆ ಸಮನ್ಸ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ನಡುವೆ ಇಡಿ ವಿಚಾರಣೆಯಲ್ಲಿ ಅಧಿಕಾರಿಗಳು ಮತ್ತಿಬ್ಬರು ಸಚಿವರ ಹೆಸರು ಬಾಯ್ಬಿಟ್ಟಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. 50:50 ಅನುಪಾತದ ಸೈಟು ಹಂಚಿಕೆ ವಿಚಾರದಲ್ಲಿ ಮತ್ತಿಬ್ಬರು ಸಚಿವರು ಪ್ರಭಾವ ಬೀರಿದ್ದಾರೆ ಎಂದು ಅಧಿಕಾರಿಗಳೇ ಬಾಯ್ಬಿಟ್ಟಿದ್ದಾರಂತೆ.
ಇದೀಗ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಮುಡಾ ಅಧಿಕಾರಿಗಳು ಹೇಳಿದಂತೆ ಪ್ರಭಾವೀ ಸಚಿವರಿಬ್ಬರ ಪಾತ್ರದ ಬಗ್ಗೆ ದಾಖಲೆಗಳು ಸಿಕ್ಕರೆ ಅವರನ್ನೂ ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಈ ಇಬ್ಬರು ಸಚಿವರು ಯಾರು ಎಂಬುದು ಬಹಿರಂಗವಾಗಿಲ್ಲ.