Publish Date: Thu, 02 Jun 2022 (20:49 IST)
Updated Date: Thu, 02 Jun 2022 (20:52 IST)
ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ನಲ್ಲಿ ಈ ಬಾರಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ಟ್ವೀಟ್ ಮಾಡಿರುವ ಸುಬ್ರಹಮಣಿಯನ್ ಸ್ವಾಮಿ, 2022ರಲ್ಲಿ ನಡೆದ ಟಾಟಾ ಐಪಿಎಲ್ ಪಂದ್ಯಗಳಲ್ಲಿ ಅಕ್ರಮದಾಟ ನಡೆದಿರಬಹುದು ಎಂದು ಗುಪ್ತಚರ ಇಲಾಖೆಯವರು ಗುಮಾನಿ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಅನುಮಾನದ ನಿವಾರಣೆಗೆ ತನಿಖೆಯ ಅಗತ್ಯವಿದೆ ಆದರೆ, ಗೃಹ ಸಚಿವ ಅಮಿತ್ ಷಾರ ಪುತ್ರ ಬಿಸಿಸಿಐನ ವಾಸ್ತಾವಿಕ ಸರ್ವಾಧಿಕಾರಿಯಾಗಿರುವ ಕಾರಣ ಯಾವುದೇ ಕಾರಣಕ್ಕು ತನಿಖೆ ನಡೆಯುವುದಿಲ್ಲ ಎಂಬ ಅಂಶ ಗೊತ್ತಿದೆ. ಈಗಾಗಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ಐಪಿಎಲ್ ಋತುವಿನಲ್ಲಿ ಹೊಸದಾಗಿ ಪರಿಚಯವಾದ ತಂಡ ಕಪ್ ಗೆಲುವುದು ತೀತಾ ವಿರಳ. ಆದರೆ, ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಈ ಸಾಧನೆ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಹಾಗೆ ಅನುಮಾನ ಮೂಡುವಂತೆ ಮಾಡಿದೆ.
ಇದಕ್ಕೆ ಪೂರಕವೆಂಬಂತೆ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜಯ್ ಶಾ ತಾವು ಒಂದು ಗೌರವಾನ್ವಿತ ಸ್ತಾನದಲ್ಲಿರುವುದನ್ನು ಮರೆತು ಸಂಭ್ರಮಿಸಿದ್ದು ಅನುಮಾನಕ್ಕೆ ಪುಷ್ಠಿ ನೀಡಿತ್ತು.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಜೋರಾಗಿ ನಡೆದಿತ್ತು. ಕರ್ನಾಟಕದ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಗುಜರಾತ್ ಗೆಲುವಿನ (ಮ್ಯಾಚ್ ಫಿಕ್ಸಿಂಗ್ ಗುಮಾನಿ) ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದರು.