Publish Date: Tue, 13 Nov 2018 (10:03 IST)
Updated Date: Tue, 13 Nov 2018 (10:07 IST)
ಬೆಂಗಳೂರು: ನಿನ್ನೆ ವಿಧಿವಶರಾದ ಕೇಂದ್ರ ಸಚಿವ ಅನಂತ ಕುಮಾರ್ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅವರ ಸರಳ ಸಜ್ಜನಿಕೆಯಿಂದಾಗಿ ಇಂದು ಕೊನೆಯ ಬಾರಿಗೆ ಅವರ ದರ್ಶನ ಪಡೆಯಲು ಸಾವಿರಾರು ಮಂದಿ ಅಭಿಮಾನಿಗಳು ಮಾತ್ರವಲ್ಲದೆ, ಪಕ್ಷ ಬೇಧ ಮರೆತು ರಾಜಕೀಯ ನಾಯಕರೂ ಆಗಮಿಸುತ್ತಿದ್ದಾರೆ.
ಈ ನಡುವೆ ಇಂದು ಕೊನೆಯ ಬಾರಿಗೆ ಅವರ ಮುಖದರ್ಶನ ಮಾಡಲು ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಗಣ್ಯರು ಮತ್ತು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಮೂಲಗಳ ಪ್ರಕಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಡಾ. ಹರ್ಷವರ್ಧನ್ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ಅವರ ಜತೆಗೆ ಬಿಜೆಪಿ ಮುತ್ಸುದ್ದಿ, ಅನಂತ ಕುಮಾರ್ ರಾಜಕೀಯ ಗುರು ಎಂದೇ ಪರಿಗಣಿಸಲಾಗಿರುವ ಎಲ್ ಕೆ ಅಡ್ವಾಣಿ ಆಗಮಿಸಿದರೂ ಅಚ್ಚರಿಯಿಲ್ಲ ಎನ್ನಲಾಗಿದೆ. ಶಿಷ್ಯ ಅನಂತ ಕುಮಾರ್ ನಿಧನದ ಸುದ್ದಿ ಕೇಳಿ ತೀವ್ರ ದುಃಖಿತರಾಗಿದ್ದ ಅಡ್ವಾಣಿ ಅವರನ್ನು ಕಳೆದುಕೊಂಡಿರುವುದು ಪಕ್ಷಕ್ಕೆ, ದೇಶಕ್ಕೆ ನಷ್ಟ ಎಂದಿದ್ದರು. ಅಡ್ವಾಣಿಯ ಆರಾಧಕರಾಗಿದ್ದ ಅನಂತ ಕುಮಾರ್ ಅಂತಿಮ ದರ್ಶನ ಪಡೆದರೆ ಬಹುಶಃ ಅವರ ಆತ್ಮಕ್ಕೂ ಸಂತೋಷವಾಗಬಹುದೇನೋ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.