Publish Date: Mon, 25 Aug 2025 (10:35 IST)
Updated Date: Mon, 25 Aug 2025 (10:37 IST)
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಮೊನ್ನೆ ವಿಧಾನಸಭೆಯಲ್ಲಿ ಬಿಜೆಪಿಯವರನ್ನು ರೇಗಿಸಲು ಆರ್ ಎಸ್ಎಸ್ ಧ್ಯೇಯ ಗೀತೆ ಹಾಡಿದ್ದರು. ಇದಕ್ಕೀಗ ಕೆಎನ್ ರಾಜಣ್ಣ ಗರಂ ಆಗಿದ್ದು ಅವರು ಏನು ಮಾಡಿದ್ರೂ ನಡೀತದೆ ಎಂದಿದ್ದಾರೆ.
ಡಿಕೆ ಶಿವಕುಮಾರ್ ವಿಧಾನಸಭೆಯಲ್ಲಿ ಆರ್ ಅಶೋಕ್ ಗೆ ಟಾಂಗ್ ಕೊಡಲು ನಮಸ್ತೇ ಸದಾ ವತ್ಸಲೇ ಹಾಡು ಹಾಡಿದ್ದರು. ಇದು ಆರ್ ಎಸ್ಎಸ್ ಧ್ಯೇಯ ಗೀತೆಯಾಗಿದ್ದು ರಾಜಕೀಯ ವಲಯದಲ್ಲಿ ಡಿಕೆಶಿ ಹಾಡಿದ ಹಾಡು ಭಾರೀ ಚರ್ಚೆಗೆ ಕಾರಣವಾಗಿದೆ.
ಇದರ ಬಗ್ಗೆ ಇದೀಗ ಮೊನ್ನೆಯಷ್ಟೇ ಸಚಿವ ಸ್ಥಾನದಿಂದ ಪದಚ್ಯುತಿಗೊಂಡಿರುವ ಕೆಎನ್ ರಾಜಣ್ಣ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ಅವರು ಏನು ಬೇಕಾದರೂ ಮಾಡಬಹುದು. ಆರ್ ಎಸ್ಎಸ್ ಗೀತೆಯನ್ನಾದರೂ ಹಾಡಬಹುದು. ಕೇಂದ್ರ ಸಚಿವ ಅಮಿತ್ ಶಾ ಜೊತೆ ವೇದಿಕೆಯಲ್ಲಿ ಕುಳಿತುಕೊಳ್ಳಬಹುದು. ಆದರೆ ನಾವು ಮಾತ್ರ ಏನೂ ಮಾಡುವಂತಿಲ್ಲ ಎಂದಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಹಾಡಿನ ಬಗ್ಗೆ ಬೇರೆ ಬೇರೆ ಕಾಂಗ್ರೆಸ್ ನಾಯಕರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಸಂಸ್ಕೃತ ಪಂಡಿತರು. ಅವರು ಭಗವದ್ಗೀತೆ ಇತ್ಯಾದಿಗಳನ್ನೆಲ್ಲಾ ತಿಳಿದಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ಬಿಜೆಪಿ, ಆರ್ ಎಸ್ಎಸ್ ಪರ ಅಲ್ಲ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ. ಇನ್ನು ಆರ್ ಎಸ್ಎಸ್ ಸಹವಾಸ ಮಾಡಬಾರದು ಎಂದು ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಹಾಡು ಹಾಡಿದ ತಕ್ಷಣ ಸಿಎಂ ಪದವಿ ಸಿಗಲ್ಲ ಎಂದು ಸತೀಶ್ ಜಾರಕಿಹೊಳಿಯೂ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.