ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ, ಅನ್ನಭಾಗ್ಯ ಯೋಜನೆ ಹಣ ಬಂದಿಲ್ಲ ಎಂದು ಜನ ಹಿಡಿಶಾಪ ಹಾಕುತ್ತಿದ್ದರೆ ಇತ್ತ ಶಾಸಕರಿಗೆ ಮಾತ್ರ ವಿಧಾನಸಭೆಯಲ್ಲಿ ಮಲಗಿ ನಿದ್ರೆ ಮಾಡಲೂ ಐಷಾರಾಮಿ ಸೋಫಾ ತರಿಸಲಾಗಿದೆ. ಇದು ಈಗ ಭಾರೀ ಟೀಕೆಗೆ ಗುರಿಯಾಗಿದೆ.
ರಾಜ್ಯ ವಿಧಾನಮಂಡಲ ಅಧಿವೇಶನ ಈಗ ನಡೆಯುತ್ತಿದ್ದು, ನಾಡಿದ್ದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಸ್ಪೀಕರ್ ಯುಟಿ ಖಾದರ್ ವಿಧಾನಸಭೆಯಲ್ಲಿ ಶಾಸಕರಿಗೆ ಮಧ್ಯಾಹ್ನದ ನಿದ್ರೆ ಮಾಡಲೂ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಪಡಸಾಲೆಯಲ್ಲಿ ಕಾಲು ಚಾಚಿ ಮಧ್ಯಾಹ್ನದ ಹೊತ್ತು ಕೆಲವು ಕ್ಷಣ ನಿದ್ರೆ ಮಾಡಲೂ ಅನುವು ಮಾಡಿಕೊಡುವಂತಹ ಸೋಫಾಗಳನ್ನು ತರಿಸಲಾಗಿದೆ. ಇದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ.
ಒಂದೆಡೆ ಸರ್ಕಾರ ಗೃಹಲಕ್ಷ್ಮಿ ಹಣ ಹಾಕಲೂ ದುಡ್ಡಿಲ್ಲವೆನ್ನುತ್ತಿದೆ. ಆದರೆ ಶಾಸಕರಿಗೆ ಮಾತ್ರ ಹೇಳಿದ ತಕ್ಷಣ ಐಷಾರಾಮಿ ಆಸನಗಳು ಬರುತ್ತಿವೆ. ಇದಕ್ಕೆಲ್ಲಾ ದುಡ್ಡು ಎಲ್ಲಿಂದ? ಜನಪ್ರತಿನಿಧಿಗಳು ನಿದ್ರೆ ಮಾಡಲು ಜನರ ತೆರಿಗೆ ದುಡ್ಡು ಬೇಕಾ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಿಡಿ ಕಾರುತ್ತಿದ್ದಾರೆ.