ಬೆಂಗಳೂರು: ಗೃಹಲಕ್ಷ್ಮಿ ಹಣ ಬರ್ತಿಲ್ಲ ಎನ್ನಲು ಅದೇನು ಸಂಬಳವಾ ಎಂದಿದ್ದ ಕೆಜೆ ಜಾರ್ಜ್ ಗೆ ಇಂದು ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ನಿಮಗೆ ತಿಂಗಳ ಸ್ಯಾಲರಿ ಬರಲ್ವಾ ಎಂದು ಟಾಂಗ್ ಕೊಟ್ಟಿದ್ದಾರೆ.
ಗೃಹಲಕ್ಷ್ಮಿ ಹಣ ಕಳೆದ ಮೂರು ತಿಂಗಳಿನಿಂದ ಬಂದಿಲ್ಲ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸಚಿವ ಕೆಜೆ ಜಾರ್ಜ್ ತಿಂಗಳು ತಿಂಗಳು ಬರಕ್ಕೆ ಅದೇನು ಸಂಬಳವಾ ಎಂದು ಉಡಾಫೆಯಿಂದ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಇಂದು ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತೀ ತಿಂಗಳು ಹಣ ಹಾಕ್ತೀವಿ ಎಂದು ಹೇಳಿಕೊಂಡು ಅಲ್ವಾ ನೀವು ಅಧಿಕಾರಕ್ಕೆ ಬಂದಿದ್ದು. ಪ್ರತೀ ಬಾರಿ ಚುನಾವಣೆ ನಡೆಯುವಾಗ ಕರೆಕ್ಟ್ ಆಗಿ ಹಣ ಹಾಕ್ತೀರಿ. ನಿರಂತರವಾಗಿ ನಡೆಯುವ ಯೋಜನೆಗಳಿಗೆ ಚುನಾವಣಾ ನೀತಿ ಸಂಹಿತ ಅನ್ವಯವಾಗಲ್ಲ ಎಂಬುದನ್ನೇ ದಾಳ ಮಾಡಿಕೊಂಡು ಹಣ ಹಾಕಿ ಮತ ಸೆಳೆಯುತ್ತೀರಿ.
ಈಗಲೂ ಕರೆಕ್ಟ್ ಆಗಿ ಹಣ ಹಾಕಿ. ನೀವು ಹಾಕ್ತೀರಿ ಎಂದು ಭರವಸೆ ನೀಡಿ ಅಲ್ವಾ ಅಧಿಕಾರಕ್ಕೆ ಬಂದಿದ್ದು. ಸಚಿವ ಜಾರ್ಜ್ ಅವರೇ ನಿಮಗೆ ಪ್ರತೀ ತಿಂಗಳು ಸಂಬಳ ಬರಲ್ವಾ? ಜನರಿಗೂ ಕೊಟ್ಟ ಮಾತಿನಂತೆ ತಿಂಗಳು ತಿಂಗಳು ಹಣ ಕೊಡಿ ಎಂದು ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.