Publish Date: Thu, 20 Feb 2025 (10:48 IST)
Updated Date: Thu, 20 Feb 2025 (10:51 IST)
ಬೆಂಗಳೂರು: ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಕ್ರೆಡಿಟ್ ಮಾಡದೇ ಇರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸಚಿವ ಸಂತೋಷ್ ಲಾಡ್ ಮೋದಿಯವರು ಕಪ್ಪು ಹಣ ತಂದು 15 ಲಕ್ಷ ನಿಮ್ಮ ಖಾತೆಗೆ ಹಾಕಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ, ಅನ್ನಭಾಗ್ಯದ ಬಾಬ್ತು ನೀಡಬೇಕಾದ ಹಣ ಫಲಾನುಭವಿಗಳಿಗೆ ಬಂದಿಲ್ಲ. ಈ ಬಗ್ಗೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ವಿಪಕ್ಷಗಳೂ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.
ಇದರ ನಡುವೆ ಸಚಿವ ಸಂತೋಷ್ ಲಾಡ್ ಗೆ ವಿಪಕ್ಷಗಳು ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಪ್ರಶ್ನೆ ಮಾಡುತ್ತಿವೆ ಎಂದಿದ್ದಕ್ಕೆ ಮೊದಲು ಮೋದಿಯವರಿಗೆ ಪ್ರಶ್ನೆ ಮಾಡಲಿ. ಅಧಿಕಾರಕ್ಕೆ ಬಂದ ಮೇಲೆ ಕಪ್ಪು ಹಣ ಭಾರತಕ್ಕೆ ತರುತ್ತೀವಿ, 15 ಲಕ್ಷ ರೂ. ಪ್ರತಿಯೊಬ್ಬರ ಖಾತೆಗೆ ಹಾಕುತ್ತೀವಿ ಎಂದೆಲ್ಲಾ ಹೇಳಿದ್ದರಲ್ಲಾ? ಬಂತಾ ನಿಮಗೆ? ಜನ ಕೇಳೋದರಲ್ಲಿ ಅರ್ಥವಿದೆ. ಆದರೆ ಬಿಜೆಪಿಯವರು ನಮ್ಮನ್ನು ಕೇಳೋರು ಅವರ ನಾಯಕರನ್ನು ಪ್ರಶ್ನೆ ಮಾಡಲಿ. ನಮಗೆ ಗೊತ್ತು, ಗೃಹಲಕ್ಷ್ಮಿ ಬಾಕಿಯಿದೆ, ಅದನ್ನು ನಾವು ಕೊಟ್ಟೇ ಕೊಡ್ತೀವಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಇನ್ನು, ತಿಂಗಳು ತಿಂಗಳ ಹಾಕಕ್ಕೆ ಗೃಹಲಕ್ಷ್ಮಿ ಯೋಜನೆ ಸಂಬಳನಾ ಎಂದಿದ್ದ ಸಚಿವ ಕೆಜೆ ಜಾರ್ಜ್ ಹೇಳಿಕೆ ಬಗ್ಗೆ ಕೇಳಿದಾಗ ಇದರ ಬಗ್ಗೆ ನಾನು ಏನೂ ಪ್ರತಿಕ್ರಿಯೆ ನೀಡಲ್ಲ ಎಂದು ಜಾರಿಕೊಂಡಿದ್ದಾರೆ.