ಮೈಸೂರು: ಸಿಎಂ ಯಾರಾಗಿದ್ದರೂ ಕಾಂಗ್ರೆಸ್ ಪಕ್ಷ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ತನ್ವೀರ್ ಸೇಠ್ ಹೇಳಿದರು.
ಶುಕ್ರವಾತ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ನಾಯಕನನ್ನಾಗಿ ನಾವು ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದೀಗ ಹೈಕಮಾಂಡ್ ಚರ್ಚಿಸಿದ್ದು ಏನೆಂಬ ವಿಚಾರವನ್ನು ಬಹಿರಂಗ ಪಡಿಸಿಲ್ಲ ಎಂದರು.
ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು. ಆದರೆ, ವರಿಷ್ಠರ ನಿರ್ಧಾರಕ್ಕೆ ನಮ್ಮ ಬೆಂಬಲವಿರುತ್ತದೆ ಎಂದರು.
ನವೆಂಬರ್ ಕ್ರಾಂತಿ ಎಂಬ ಚರ್ಚೆಯನ್ನು ಯಾರು ಶುರು ಮಾಡಿದ್ರು, ಅವರೀಗ ಎಲ್ಲಿದ್ದಾರೆಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ, ಆ ರೀತಿಯ ಯಾವುದೇ ವಿದ್ಯಮಾನ ಅಥವಾ ಸಂದೇಶ ಯಾರಿಗೂ ಇಲ್ಲ. ಅಧಿಕಾರ ಹಂಚಿಕೆಯ ವಿಷಯವೂ ಇಲ್ಲ. ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದೇ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಹೇಳುತ್ತಿದ್ದಾರೆ. ಹೈಕಮಾಂಡ್ ಹೇಳದೇ ನಾವು ಆಸೆ ಇಟ್ಟುಕೊಂಡರೆ ಅದು ಆಸೆಯಾಗಿಯೇ ಉಳಿಯುತ್ತದೆ ಎಂದರು.
ಬಿ.ನಾಗೇಂದ್ರ ಹಾಗೂ ಕೆ.ಎನ್. ರಾಜಣ್ಣ ರಾಜೀನಾಮೆಯ ಕಾರಣದಿಂದಾಗಿ ಎರಡು ಸಚಿವ ಸ್ಥಾನಗಳಷ್ಟೆ ಖಾಲಿ ಇವೆ. ಅವುಗಳನ್ನು ತುಂಬುವಂತೆಯೂ ಯಾರೂ ಬೇಡಿಕೆ ಇಟ್ಟಿಲ್ಲ. ನ.20 ಅಥವಾ 26ರಂದು ಸಚಿವ ಸಂಪುಟ ಪುನರ್ರಚನೆ ನಡೆಯುವ ಬಗ್ಗೆ ಮುಖ್ಯಮಂತ್ರಿಯವರ ಕಚೇರಿಯಿಂದ ಮಾಹಿತಿ ಬಂದಿದೆ. ಅರ್ಹರಿಗೆ ಅವಕಾಶ ದೊರೆಯಲಿದೆ ಎಂದರು.