Publish Date: Thu, 30 Oct 2025 (16:27 IST)
Updated Date: Thu, 30 Oct 2025 (16:29 IST)
ಬೆಂಗಳೂರು: ಬಿಜೆಪಿ ಶಾಸಕ, ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ನಿನ್ನೆ ಸಿಎಂ ಸಿದ್ದರಾಮಯ್ಯ ಕಾರಿನಲ್ಲಿ ಒಟ್ಟಿಗೇ ಪ್ರಯಾಣ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರು ಈ ರೀತಿ ಮಾಡಿದ್ದರ ಹಿಂದಿನ ನಿಜ ಕಾರಣ ಬಯಲಾಗಿದೆ.
ಎನ್ ರವಿಕುಮಾರ್ ಮುಖ್ಯಮಂತ್ರಿಗಳ ಕಾರಿನಲ್ಲಿ ಕುಳಿತು ಪ್ರಯಾಣ ಮಾಡುವುದಕ್ಕೂ ಕಾರಣವಿದೆ ಎಂದು ಡಿಜಿಟಲ್ ಕ್ರಿಯೇಟರ್ ರವಿ ಶಿವರಾಮ್ ಎಂಬವರು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಇದರ ಹಿಂದೆ ಒಳ್ಳೆಯ ಉದ್ದೇಶವಿತ್ತು ಎಂದು ಅವರು ದಾಖಲೆ ಸಮೇತ ವಿವರಿಸಿದ್ದಾರೆ.
37 ಜನರ ಜೀವ ಉಳಿಸುವ ಕಾರ್ಯವನ್ನು ವಿಧಾನ ಪರಿಷತ್ ವಿಪಕ್ಷ ಸಚೇತಕ ಎನ್ ರವಿಕುಮಾರ್ ಅವರು ಮುತುವರ್ಜಿವಹಿಸಿ ಮಾಡುತ್ತಿರೋದು ಶ್ಲಾಘನೀಯ. ಅತ್ಯಂತ ವಿರಳ ಕಾಯಿಲೆಗೆ ರಾಜ್ಯದಲ್ಲಿ 37 ಮಂದಿ ತುತ್ತಾಗಿದ್ದಾರೆ. ಆ ವಿರಳ ಕಾಯಿಲೆಗೆ ಒಮ್ಮೆ ಚಿಕಿತ್ಸೆ ಕೊಡಿಸಲು( ಒಂದು ಇಂಜೆಕ್ಷನ್ ಗೆ) 4ಲಕ್ಷ ರೂಪಾಯಿ ತಗಲುತ್ತದೆ. ವರ್ಷಕ್ಕೆ ಸುಮಾರು 14 ಕೋಟಿ ಚಿಕಿತ್ಸೆಗೆ ವೆಚ್ಚ ತಗಲುತ್ತದೆ. ಪಾಪ ಇಷ್ಟು ಖರ್ಚು ಮಾಡುವ ಶಕ್ತಿ ಯಾರಿಗೂ ಇಲ್ಲ. ಹೀಗಾಗಿ ಸರ್ಕಾರ ಈ ಬಗ್ಗೆ ಮುತುವರ್ಜಿ ವಹಿಸಿ, 50 ಕೋಟಿ ರೂಪಾಯಿಯನ್ನು ಬ್ಯಾಂಕ್ ಲ್ಲಿ ಡೆಪೊಸಿಟ್ ಮಾಡಿದರೆ, ಅದರಿಂದ ಬರುವ ಬಡ್ಡಿ ಹಣದಿಂದ ಆ ಜೀವಿಗಳಿಗೆ ಚಿಕಿತ್ಸೆ ನೀಡಬಹುದು ಎಂಬ ಸಲಹೆ ಬಂದಿದೆ. ಹೀಗಾಗಿ ಈ ವಿಚಾರವನ್ನ ಮಾನ್ಯ ಮುಖ್ಯಮಂತ್ರಿ ಅವರ ಗಮನಕ್ಕೆ ತರಲು ರವಿಕುಮಾರ್ ಅವರು ಮನವಿ ಪತ್ರದೊಂದಿಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಷಯವನ್ನು ವಿವರಿಸಿದ್ದಾರೆ. ಮುಖ್ಯಮಂತ್ರಿಗಳು ಕಾರ್ಯದ ಒತ್ತಡದಲ್ಲಿ ಇದ್ದರೂ, ವಿಷಯ ಗಂಭೀರವಾಗಿ ಇರುವುದರಿಂದ ಸಿದ್ದರಾಮಯ್ಯನವರು ಈ ವಿಷಯಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ ಮಾತ್ರವಲ್ಲ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಏನು ಮಾಡಬೇಕು ಮಾಡಬಹುದು ಎನ್ನೋದನ್ನ ಚರ್ಚೆ ಮಾಡೋಣ, ನಾನು ಈಗ ವಿಧಾನಸೌಧಕ್ಕೆ ಹೊರಟಿದ್ದೇನೆ. ನೀನು ಕಾರಿನಲ್ಲಿ ಕುಳಿತುಕೊ ಎಂದು ಜೊತೆಗೆ ಕರೆದುಕೊಂಡ ಬಂದ ಸಿದ್ದರಾಮಯ್ಯ ಅವರು ವಿಧಾನಸೌಧ ತಲುಪಿದ ಮೇಲೂ ಮುಖ್ಯಮಂತ್ರಿಗಳ ಚೇಂಬರ್ ತನಕ ಇದೇ ವಿಷಯ ಚರ್ಚೆ ನಡೆಸಿದ್ದಾರೆ. ಈ ಎಲ್ಲಾ ಜೀವಿಗಳಿಗೆ ಸಹಾಯ ಮಾಡುವ ಸರ್ಕಾರದಿಂದ ಬೇಕಾದ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇದಕ್ಕೆ ತಕ್ಕಂತೆ ಈ ಫೋಟೋದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರವಿಕುಮಾರ್ ಯಾವುದೋ ಕಾಗದ ಪತ್ರಗಳನ್ನು ತೋರಿಸುತ್ತಿರುವುದು ಕಾಣಬಹುದು.