Publish Date: Thu, 30 Oct 2025 (09:37 IST)
Updated Date: Thu, 30 Oct 2025 (09:43 IST)
ಬೆಂಗಳೂರು: ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಸಚಿವರುಗಳಿಂದ 300 ಕೋಟಿ ರೂ ಕಲೆಕ್ಷನ್ ಮಾಡಿ ಹೈಕಮಾಂಡ್ ಗೆ ಬಿಹಾರ ಚುನಾವಣೆ ಖರ್ಚಿಗೆ ಕೊಟ್ಟಿದ್ದಾರೆ ಎಂದು ಬಿಜೆಪಿ ನಾಯಕ ಬಿ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.
ಬಿಹಾರದಲ್ಲಿಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಖರ್ಚಿಗೆ ರಾಜ್ಯ ಕಾಂಗ್ರೆಸ್ ಕೋಟಿ ಕೋಟಿ ಹಣ ಹೈಕಮಾಂಡ್ ಗೆ ಕಪ್ಪ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೇ ಈ ಮೊದಲು ಆರೋಪಿಸಿದ್ದರು. ಇದೀಗ ಬಿ ಶ್ರೀರಾಮುಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಸಚಿವರುಗಳ ಜೊತೆ ದಿಡೀರ್ ಡಿನ್ನರ್ ಮೀಟ್ ಮಾಡಿದ್ದರು. ಈ ಡಿನ್ನರ್ ಮೀಟ್ ನ ಹಿಂದಿನ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈ ಡಿನ್ನರ್ ಮೀಟ್ ಗೆ ಸಚಿವರನ್ನು ಕರೆಸಿ 300 ಕೋಟಿ ರೂ. ಕಲೆಕ್ಷನ್ ಮಾಡಿ ಸಿದ್ದರಾಮಯ್ಯ ಹೈಕಮಾಂಡ್ ಗೆ ನೀಡಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಬಂದಿತ್ತು. ಆದರೆ ಈಗ ಹೈಕಮಾಂಡ್ ಗೆ ಕಪ್ಪ ಕಲೆಕ್ಷನ್ ಮಾಡಿ ಕೊಟ್ಟಿದ್ದರಿಂದ ಅವರ ಕುರ್ಚಿ ಗಟ್ಟಿ ಮಾಡಿಕೊಂಡಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದ್ದಾರೆ. ಆದರೆ ಇದನ್ನು ಕಾಂಗ್ರೆಸ್ ನಾಯಕರು ಅಲ್ಲಗಳೆದಿದ್ದಾರೆ.