Publish Date: Mon, 18 Aug 2025 (11:08 IST)
Updated Date: Mon, 18 Aug 2025 (11:10 IST)
ಬೆಂಗಳೂರು: ಧರ್ಮಸ್ಥಳದಲ್ಲಿ ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಎಸ್ಐಟಿ ಈಗ ತಾತ್ಕಾಲಿಕ ಬ್ರೇಕ್ ಕೊಟ್ಟಿದೆ. ಆದರೆ ಇಂದು ಗೃಹಸಚಿವ ಜಿ ಪರಮೇಶ್ವರ್ ಅಧಿವೇಶನದಲ್ಲಿ ಎಸ್ಐಟಿ ತನಿಖೆ ಬಗ್ಗೆ ಮಾತನಾಡಲಿದ್ದು, ಇದರ ಬಗ್ಗೆ ಏನು ಹೇಳಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.
ಧರ್ಮಸ್ಥಳ ಪ್ರಕರಣ ಈಗ ರಾಜಕೀಯವಾಗಿಯೂ ಭಾರೀ ಸದ್ದು ಮಾಡುತ್ತಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದರಲ್ಲಿ ಎಡಪಕ್ಷಗಳ ಹುನ್ನಾರವಿದೆ ಎಂದು ಬಿಜೆಪಿ ಆರೋಪಿಸಿದ್ದು ನಿನ್ನೆ ಧರ್ಮಸ್ಥಳ ಚಲೋ ಯಾತ್ರೆ ನಡೆಸಿತ್ತು.
ಇದೀಗ ಮುಸುಕುಧಾರಿಯ ಬಗ್ಗೆಯೇ ತನಿಖೆ ನಡೆಸಬೇಕು ಎಂದು ಒತ್ತಾಯಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಇಂದು ಗೃಹಸಚಿವ ಡಾ ಜಿ ಪರಮೇಶ್ವರ್ ಸದನದಲ್ಲಿ ಎಸ್ಐಟಿ ತನಿಖೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಅವರು ಎಸ್ಐಟಿ ತಂಡದಿಂದ ವರದಿ ಪಡೆದಿದ್ದಾರೆ.
ಹೀಗಾಗಿ ಈಗ ಎಸ್ಐಟಿ ತನಿಖೆ ಎಲ್ಲಿಗೆ ಬಂದು ತಲುಪಿದೆ? ಇದಕ್ಕೆ ಬ್ರೇಕ್ ಬೀಳುತ್ತಾ? ದೂರು ಕೊಟ್ಟವರನ್ನೇ ತನಿಖೆ ನಡೆಸಲಾಗುತ್ತದೆಯೇ ಎಂಬಿತ್ಯಾದಿ ಮಾಹಿತಿಗಳನ್ನು ಅವರು ಇಂದು ಸದನದಲ್ಲಿಹೇಳುವ ಸಾಧ್ಯತೆಯಿದೆ. ಹೀಗಾಗಿ ಇಂದು ಅವರ ಮಾತಿಗಾಗಿ ಎಲ್ಲರೂ ಕುತೂಹಲದಿಂದ ಎದಿರು ನೋಡುತ್ತಿದ್ದಾರೆ.