ಬೆಂಗಳೂರು: ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಡಿಕೆಶಿ ಮುಂದಿನ ನಡೆಯೇನು ಎಂಬುದು ಬಹಿರಂಗವಾಗಿದೆ.
ಸಿಎಂ ಬದಲಾವಣೆ ವಿಚಾರ ಇನ್ನೂ ತಣ್ಣಗಾಗಿಲ್ಲ. ಸದ್ಯಕ್ಕೆ ಅಧಿವೇಶನ ನಡೆಯುತ್ತಿದೆ ಎಂಬ ಕಾರಣಕ್ಕಷ್ಟೇ ರಾಜ್ಯದ ನಾಯಕರು ಸುಮ್ಮನಾಗಿದ್ದಾರೆ. ಆದರೆ ಅಧಿವೇಶನ ಮುಗಿದ ಬಳಿಕ ಈ ವಿಚಾರ ಮತ್ತೆ ಭುಗಿಲೇಳಲಿದೆ. ಈಗಾಗಲೇ ಹೈಕಮಾಂಡ್ ಕೂಡಾ ಅಧಿವೇಶನ ಮುಗಿದ ತಕ್ಷಣ ಈ ವಿಚಾರವನ್ನು ನಿರ್ಧಾರ ಮಾಡುವುದಾಗಿ ತಿಳಿಸಿದೆ.
ಡಿಸೆಂಬರ್ 20-21 ರಂದು ದೆಹಲಿಯಲ್ಲಿ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಈ ಸಭೆಯಲ್ಲಿ ರಾಜ್ಯದ ನಾಯಕತ್ವ ಬದಲಾವಣೆ ವಿಚಾರ ಅಂತಿಮವಾಗಲಿದೆ.
ಈ ಸಭೆಯಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು, ಸಿದ್ದರಾಮಯ್ಯ ಕೂಡಾ ಈ ಸಭೆಗೆ ತಯಾರಾಗುತ್ತಿದ್ದು ಇದರ ಪೂರ್ವಭಾವಿಯಾಗಿಯೇ ನಿನ್ನೆ ಬೆಳಗಾವಿಯಲ್ಲಿ ಅಹಿಂದ ನಾಯಕರ ಸಭೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಅಧಿವೇಶನ ಮುಗಿದ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವುದು ಖಚಿತವಾಗಿದೆ.