ಬೆಂಗಳೂರು: ಕೊವಿಡ್ ವ್ಯಾಕ್ಸಿನ್ ಗೂ ಹೃದಯಾಘಾತಕ್ಕೂ ಸಂಬಂಧವಿರಬಹುದು ಎಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ತದ್ವಿರುದ್ಧವಾಗಿ ಈಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಹಾಸನದಲ್ಲಿ ಸರಣಿ ಹೃದಯಾಘಾತಗಳಾದ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಕೊವಿಡ್ ವ್ಯಾಕ್ಸಿನ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ ಎಂದು ಅನುಮಾನವಿದೆ. ಇದರ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ ಎಂದಿದ್ದರು.
ಆದರೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಾವು ಈಗ ವರದಿ ಮಾಡಲು ಹೇಳಿದ್ದೇವೆ. ತಜ್ಞರ ಸಮಿತಿ ತನಿಖೆ ಮಾಡಿ ವರದಿ ಕೊಡುತ್ತದೆ.
ಈ ವಿಚಾರದ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿ ಮಾಡುವುದು ಬೇಡ. ವರದಿ ಬಂದ ಮೇಲೆ ಹೇಳೋಣ. ಸುಮ್ಮನೇ ಹೃದಯಾಘಾತ ಏಕಾಏಕಿ ಹೆಚ್ಚಾಗಿದೆ ಎಂದು ಗಾಬರಿ ಮಾಡೋದು ಬೇಡ. ಮೇಲ್ನೋಟಕ್ಕೆ ಹೃದಯಾಘಾತಕ್ಕೆ ಜೀವನ ಶೈಲಿ, ಆಹಾರ ಶೈಲಿ ಕಾರಣ ಎಂದು ಕಂಡುಬರುತ್ತಿದೆ. ಆದರೆ ಕೊವಿಡ್ ವ್ಯಾಕ್ಸಿನ್ ಕಾರಣವಾ ಎಂದು ಆತುರದಲ್ಲಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇರವಾಗಿ ಕೊವಿಡ್ ವ್ಯಾಕ್ಸಿನ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದು ಚರ್ಚೆಗೂ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಐಸಿಎಂಆರ್ ಕೊವಿಡ್ ವ್ಯಾಕ್ಸಿನ್ ಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ ಎಂದು ಸಂಶೋಧನೆ ವರದಿ ಪ್ರಕಟಿಸಿತ್ತು.