ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಸದ್ಯಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಡದಿ ಬಳಿ ಕಾರಿನಲ್ಲಿ ತೆರಳುತ್ತಿದ್ದಾಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದೆ. ರಾಮನಗರದ ಮುತ್ತಪ್ಪ ರೈ ಮನೆ ಬಳಿಯೇ ಘಟನೆ ನಡೆದಿದೆ. ತೀರಾ ಸನಿಹದಿಂದಲೇ ಗುಂಡು ಹೊಡೆಯಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ರಿಕ್ಕಿ ರೈ ಮೂಗು, ಕೈಗೆ ಗುಂಡೇಟು ತಗುಲಿದೆ.
ಸದ್ಯಕ್ಕೆ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ 11.30 ಕ್ಕೆ ರಿಕ್ಕಿ ರೈ ತಮ್ಮ ಮನೆಯಿಂದ ಬೆಂಗಳೂರು ಕಡೆಗೆ ಫಾರ್ಚ್ಯೂನರ್ ಕಾರಿನಲ್ಲಿ ತೆರಳುತ್ತಿದ್ದಾಗ ಘಟನೆ ನಡೆದಿದೆ. ರಿಕ್ಕಿ ಹಿಂಬದಿ ಸೀಟ್ ನಲ್ಲಿ ಕೂತಿದ್ದರು ಎನ್ನಲಾಗಿದೆ.
ಪ್ರತೀ ಬಾರಿಯೂ ರಿಕ್ಕಿ ರೈ ತಾವೇ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಹೀಗಾಗಿ ಇದನ್ನು ತಿಳಿದುಕೊಂಡೇ ದುಷ್ಕರ್ಮಿ ಕಾರು ಚಾಲಕನ ಸೀಟು ಗುರಿಯಾಗಿಸಿಕೊಂಡೇ ದಾಳಿ ಮಾಡಿದ್ದಾನೆ. ಆದರೆ ನಿನ್ನೆ ತಡರಾತ್ರಿಯಾಗಿದ್ದರಿಂದ ರಿಕ್ಕಿ ಡ್ರೈವರ್ ಜೊತೆಗೆ ತೆರಳಿದ್ದರು. ಗುಂಡಿನ ದಾಳಿಯಾಗುತ್ತಿದ್ದಂತೇ ಚಾಲಕ ಮುಂದಕ್ಕೆ ಬಾಗಿದ್ದರಿಂದ ಅವರಿಗೆ ಅಪಾಯವಾಗಲಿಲ್ಲ. ಪೊಲೀಸರು ಈಗ ಸ್ಥಳಕ್ಕೆ ಶ್ವಾನ ದಳವನ್ನು ಕರೆಸಿಕೊಂಡು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.