Publish Date: Sat, 19 Apr 2025 (08:40 IST)
Updated Date: Sat, 19 Apr 2025 (08:43 IST)
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಮತ್ತು ಬಿಸಿಲಿನ ಕಣ್ಣಾಮುಚ್ಚಾಲೆ ನಡೆದಿದೆ. ಇಂದು ರಾಜ್ಯದ ಈ ಕೆಲವು ಜಿಲ್ಲೆಗಳಿಗೆ ಮಾತ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳಿವೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆ ಕಳೆದ ವಾರ ಉತ್ತಮ ಮಳೆಯಾಗಿತ್ತು. ಆದರೆ ಇದೀಗ ವಾರಂತ್ಯದಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಇಂದು ಬಹುತೇಕ ಕಡೆ ಮಳೆಯ ಸಾಧ್ಯತೆ ಕಡಿಮೆ. ಆದರೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.
ದಕ್ಷಿಣ ಕನ್ನಡದಲ್ಲಿ ಕಳೆದ ವಾರ ಮತ್ತು ಈ ವಾರದ ಆರಂಭದಲ್ಲಿ ಭಾರೀ ಮಳೆಯಾಗಿತ್ತು. ಬಳಿಕ ಮಳೆ ಕೊಂಚ ಕ್ಷೀಣವಾಗಿದೆ. ಇದೀಗ ತಾಪಮಾನ ಗರಿಷ್ಠ ಮಟ್ಟದಲ್ಲೇ ಇದೆ. ಇಂದು ಮತ್ತು ನಾಳೆ ಈ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿರಲಿದೆ. ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ಬಹುತೇಕ ಬಿಸಿಲಿನ ವಾತಾವರಣವಿರುವುದು.
ಆದರೆ ಕೊಡಗು, ಚಾಮರಾಜನಗರ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳಿವೆ. ಉಳಿದಂತೆ ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 33-34 ಡಿಗ್ರಿಯವರೆಗೆ ತಲುಪುವ ನಿರೀಕ್ಷೆಯಿದೆ.