Publish Date: Thu, 27 Dec 2018 (13:24 IST)
Updated Date: Thu, 27 Dec 2018 (13:52 IST)
ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಹಾಡು ಹಗಲೇ ಸೆಕ್ಯೂರಿಟಿ ಗಾರ್ಡ್ ದಂಪತಿ ತಾವು ಕೆಲಸ ಮಾಡುತ್ತಿದ್ದ ಮನೆಗೆ ಕನ್ನ ಹಾಕಿದ್ದಾರೆ.
ಮನೆಯಲ್ಲಿದ್ದ ಚಿನ್ನಾಭರಣ ಹಾಗು ಬೆಲೆ ಬಾಳುವ ವಸ್ತುಗಳನ್ನು ಕದ್ದು ಸೆಕ್ಯುರಿಟಿ ಗಾರ್ಡ ದಂಪತಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ರಾಮಮೂರ್ತಿನಗರ ಪೋಲಿಸ್ ಠಾಣಾ ವ್ಯಾಪ್ತಿಯ ಹೊರಮಾವು ಗ್ರಾಮದಲ್ಲಿ ನಡೆದಿದೆ.
ಮನೆಯ ಮಾಲೀಕ ಪ್ರವೀಣ್ ಕುಮಾರ್ ಎಂಬುವರ ಮನೆಯಲ್ಲಿ ಒಂದು ವರ್ಷದಿಂದ ಸೆಕ್ಯೂರಿಟಿ ಗಾರ್ಡ್ ಆಗಿದ್ದ ನೇಪಾಳಿ ಮೂಲದ ಮಂಗಲ್ ಹಾಗೂ ಸೌಭಾಗ್ಯ ದೇವಿ ಎಂಬುವವರು ಕೆಲಸ ಮಾಡುತ್ತಿದ್ದರು. ಮುಂಜಾನೆ ಮನೆಯ ಮಾಲೀಕ ಪ್ರವೀಣ್ ಕುಮಾರ್ ದಂಪತಿ ಕೆಲಸದ ನಿಮಿತ್ತ ಹೊರಗಡೆ ಹೋದ ಸಂದರ್ಭದಲ್ಲಿ ಮನೆಯಲ್ಲಿನ ಬೀರು ಬೀಗ ಒಡೆದು ಬೀರುವಿನಲ್ಲಿದ್ದ 750 ಗ್ರಾಂ ಚಿನ್ನಾಭರಣ ಹಾಗು ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಕಳ್ಳತನ ಮಾಡಿರುವ ಸುಳಿವು ಸಿಗಬಾರದು ಎಂದು ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ಸಮೇತ ಪರಾರಿಯಾಗಿದ್ದಾರೆ.
ಪ್ರವೀಣ್ ಕುಮಾರ್ ದಂಪತಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆ ಮಾಲೀಕ ಪ್ರವೀಣ್ ಕುಮಾರ್ ರಾಮಮೂರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಆ ಖತರ್ನಾಕ್ ದಂಪತಿ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.