Publish Date: Wed, 12 Dec 2018 (19:15 IST)
Updated Date: Wed, 12 Dec 2018 (19:17 IST)
ಮನೆಯೊಂದರ ಬೀಗ ಮುರಿದು ಮನೆಯಲ್ಲಿದ್ದ ಚಿನ್ನ, ಬೆಳ್ಳಿಯ ಆಭರಣಗಳು ಹಾಗೂ 14 ಕೈಗಡಿಯಾರಗಳನ್ನು ಕಳವು ಮಾಡಿದ ಆರೋಪಿಗೆ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.
ಕಲಬುರಗಿ ನಗರದ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿ.ಐ.ಬಿ. ಕಾಲೋನಿಯ ಮನೆಯೊಂದರ ಬೀಗ ಮುರಿದು ಮನೆಯಲ್ಲಿದ್ದ ಚಿನ್ನ, ಬೆಳ್ಳಿಯ ಆಭರಣಗಳು ಹಾಗೂ 14 ಕೈಗಡಿಯಾರಗಳನ್ನು ಕಳವು ಮಾಡಿದ ಆರೋಪಿ ಮಹೇಶ ತಂದೆ ರಾಜಶೇಖರ ಎಂಬಾತನನ್ನು 2 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 2000 ರೂ. ದಂಡ ವಿಧಿಸಿ ಕಲಬುರಗಿ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಸುಭಾಷಚಂದ್ರ ರಾಠೋಡ ತೀರ್ಪು ನೀಡಿದ್ದಾರೆ.
ಕಲಬುರಗಿ ತಾಲೂಕಿನ ಸುಲ್ತಾನಪುರ ಗ್ರಾಮದ ನಿವಾಸಿ ಆರೋಪಿತ ಮಹೇಶ ತಂದೆ ರಾಜಶೇಖರ 2016ರ ಅಕ್ಟೋಬರ್ 11 ರಂದು ರಾತ್ರಿ ಸಿ.ಐ.ಬಿ. ಕಾಲೋನಿಯ ನಿವಾಸಿ ಮಲ್ಲಪ್ಪ ತಂದೆ ಪ್ರಭು ದೊಡ್ಡಮನಿ ಅವರಿಗೆ ಸೇರಿದ ಮನೆಯಲ್ಲಿ ಮನೆಯವರು ಯಾರು ಇಲ್ಲದನ್ನು ಕಂಡು ಮನೆಯ ಬೀಗ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಸೋನಾಟಾ ಕಂಪನಿ 14 ಕೈಗಡಿಯಾರಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಈತನ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿ ಪಿ.ಐ ಜೇಮ್ಸ್ ಮಿನೇಜಸ್ ಅವರು ತನಿಖೆ ಮಾಡಿ ತನಿಖೆಯ ಸಂದರ್ಭದಲ್ಲಿ ಆರೋಪಿತನಿಂದ ಸದರಿ ಮುದ್ದೆಮಾಲುಗಳನ್ನು ವಶಪಡಿಸಿಕೊಂಡು ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು.
ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಐ.ಪಿ.ಸಿ. 457, 380ರನ್ವಯ 2 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 2000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದು, ಒಂದು ವೇಳೆ ದಂಡ ನೀಡಲು ತಪ್ಪಿದಲ್ಲಿ 15 ದಿನಗಳ ಸಾದಾ ಶಿಕ್ಷೆ ಸಹ ಪ್ರಕಟಿಸಿರುತ್ತಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಛಾಯಾದೇವಿ ಪಾಟೀಲ ವಾದ ಮಂಡಿಸಿದ್ದರು.