Publish Date: Fri, 21 Feb 2025 (16:07 IST)
Updated Date: Fri, 21 Feb 2025 (16:09 IST)
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಇಂದು ದಿಡೀರ್ ದಟ್ಟ ಹೊಗೆಯಿಂದ ಆವೃತವಾಗಿ ಬೆಂಕಿ ಕಾಣಿಸಿಕೊಂಡಿದ್ದು ಪ್ರಾಥಮಿಕ ತನಿಖೆಯಲ್ಲಿ ಕಿಡಿಗೇಡಿಗಳ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.
ಬಿಸಿಲಿನಿಂದಾಗಿ ಗಿಡ, ಮರಗಳು ಒಣಗಿದೆ. ಇದರಿಂದಾಗಿ ಬೆಂಕಿ ಬೇಗನೇ ದೂರದವರೆಗೂ ವ್ಯಾಪಿಸಿದೆ. ನೂರಾರು ಎಕರೆ ಪ್ರದೇಶಕ್ಕೆ ಬೆಂಕಿ ಹಬ್ಬಿಕೊಂಡಿದೆ. ಒಣಗಿದ ತರಗೆಲೆಗಳಿಂದಾಗಿ ಬೆಂಕಿ ಬೇಗನೇ ವ್ಯಾಪಿಸಿದೆ.
ಇದರಿಂದಾಗಿ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸ ಪಡುವಂತಾಗಿದೆ. ಬೆಂಕಿ ಹತ್ತಿಕೊಂಡಿರುವ ಜಾಗಕ್ಕೆ ತೆರಳಲೂ ಆಗದಂತಹ ಪರಿಸ್ಥಿತಿಯಿದೆ. ಅಷ್ಟರಮಟ್ಟಿಗೆ ದಟ್ಟ ಹೊಗೆಯೂ ಕಂಡುಬಂದಿದೆ. ಈಗಾಗಲೇ ಮೂರು ಅಗ್ನಿಶಾಮಕ ದಳ ವಾಹನಗಳು ಬೆಂಕಿ ನಂದಿಸಲು ಪ್ರಯತ್ನಿಸುತ್ತಿವೆ.
ಸ್ಥಳೀಯರೂ ಕೈ ಜೋಡಿಸಿದ್ದು ಬೆಂಕಿ ನಂದಿಸಲು ತಮ್ಮಿಂದಾದ ಪ್ರಯತ್ನ ಮಾಡುತ್ತಿದ್ದಾರೆ. ಮೊದಲು ರಸ್ತೆ ಬದಿಯಲ್ಲಿ ಬೆಂಕಿ ಹತ್ತಿಕೊಂಡಿತ್ತು. ಹೀಗಾಗಿ ಯಾರೋ ಕಿಡಿಗೇಡಿಗಳು ಬೇಕೆಂದೇ ಮಾಡಿರಬಹುದು ಎಂದು ಶಂಕಿಸಲಾಗಿದೆ.