Select Your Language

Notifications

webdunia
webdunia
webdunia
webdunia

ರೈತರು ಮಧ್ಯರಾತ್ರಿವರೆಗೆ ಹೊಲದಲ್ಲಿ ಕೂತರೂ ಕರೆಂಟ್ ಬರಲ್ಲ: ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಶುಕ್ರವಾರ, 21 ಫೆಬ್ರವರಿ 2025 (15:25 IST)
ಬೆಂಗಳೂರು: ರಾಜ್ಯ ಸರಕಾರ ಎಚ್ಚತ್ತುಕೊಳ್ಳಬೇಕಿದೆ. ಗ್ಯಾರಂಟಿಗಳ ಭ್ರಮೆಯಿಂದ ಹೊರಬಂದು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ನಾಡಿನ ರೈತರ ಸಂಕಷ್ಟವನ್ನು ನಿವಾರಿಸಬೇಕು. ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಸಮರ್ಪಕವಾಗಿ ಆರೇಳು ತಾಸು ವಿದ್ಯುತ್ ಕೊಡಲು ರಾಜ್ಯ ಸರಕಾರದಿಂದ ಆಗುತ್ತಿಲ್ಲ; ರೈತರಿಗೆ ಯಾವಾಗ ಕರೆಂಟ್ ಬರುತ್ತದೆ; ಯಾವಾಗ ಇರುವುದಿಲ್ಲ ಎಂದು ತಿಳಿಯದಂತಾಗಿದೆ. ಇಲಾಖೆಯವರು ರಾತ್ರಿ 10 ಗಂಟೆಯಿಂದ ವಿದ್ಯುತ್ ಕೊಡುವುದಾಗಿ ಹೇಳುತ್ತಾರೆ. ರೈತರು ಹೊಲದಲ್ಲಿ ಕಾದರೂ 12 ಗಂಟೆವರೆಗೂ ವಿದ್ಯುತ್ ಬರುವುದಿಲ್ಲ ಎಂದು ಆಕ್ಷೇಪಿಸಿದರು.
 
ಸರಕಾರವು ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಟೀಕಿಸಿದ ಅವರು, ವಿದ್ಯುತ್ ಅಭಾವ ಇದ್ದರೆ ಹೊರರಾಜ್ಯಗಳಿಂದ ಖರೀದಿ ಮಾಡಬೇಕೇ ಎಂಬುದರ ಕಡೆ ತಯಾರಿಯನ್ನು ರಾಜ್ಯ ಸರಕಾರ ಮಾಡಬೇಕಿದೆ. ವಿದ್ಯುತ್ ಅವ್ಯವಸ್ಥೆಯಿಂದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಬಾರದು. ರೈತರ ಸಂಕಷ್ಟ ಪರಿಹರಿಸಿ ಎಂದು ಆಗ್ರಹಿಸಿದರು.
 
ನಗರದ ಗುಂಡಿ ಮುಚ್ಚಲಾಗದ ಸರಕಾರ
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರಿನ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಒಂದು ಹೇಳಿಕೆ ನೀಡಿದ್ದಾರೆ. ಇನ್ನೂ ಎರಡು ಮೂರು ವರ್ಷಗಳು ಕಳೆದರೂ ಸಹ, ಭಗವಂತನೇ ಭೂಮಿಗೆ ಅವತರಿಸಿ ಬಂದರೂ ಈ ಬೆಂಗಳೂರನ್ನು ಉದ್ಧಾರ ಮಾಡಲು ಆಗುವುದಿಲ್ಲ ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದವರು; ಬೆಂಗಳೂರನ್ನು ಸಿಂಗಾಪುರ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದವರು. ಅಂಥ ಸಚಿವರ ಬಾಯಲ್ಲಿ ಬಂದ ಮಾತು ಇದು ಎಂದು ಟೀಕಿಸಿದರು.
 
ಕಾಂಗ್ರೆಸ್ ಸರಕಾರದ ಯೋಗ್ಯತೆಗೆ ಬೆಂಗಳೂರು ಮಹಾನಗರದಲ್ಲಿ ಗುಂಡಿ ಮುಚ್ಚಲು ಸಾಧ್ಯ ಆಗುತ್ತಿಲ್ಲ; ಬೆಂಗಳೂರಿನಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಶಾಸಕರಿಗೆ ಹಣ ಕೊಡುತ್ತಿಲ್ಲ. ಇವರು ಅಭಿವೃದ್ಧಿ ಬಗ್ಗೆ ಮಾತನಾಡುವುದು ದುರಂತ ಎಂದು ತಿಳಿಸಿದರು. ಭಾರತವನ್ನು ಬೆಂಗಳೂರಿನ ಮುಖೇನ ನೋಡುತ್ತಾರೆ ಎಂದು ವಿವರಿಸಿದರು. ಡಿ.ಕೆ.ಶಿವಕುಮಾರ್ ಅವರ ಇಂಥ ಹೇಳಿಕೆ ಸಹಜವಾಗಿ ಸಾಕಷ್ಟು ಜನರಿಗೆ ಬೇಸರ ತಂದಿದೆ ಎಂದು ವಿಶ್ಲೇಷಿಸಿದರು.
 
9 ವಿವಿ ಮುಚ್ಚುವ ತೀರ್ಮಾನ ಅವೈಜ್ಞಾನಿಕ
ಇವತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದುಂಡುಮೇಜಿನ ಸಭೆಯನ್ನು ಆಯೋಜಿಸಿದೆ. ಶಿಕ್ಷಣ ತಜ್ಞರು, ಅನೇಕ ಹಿರಿಯರು, ಜನಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಮುಂದಿನ 5 ವರ್ಷಗಳಲ್ಲಿ 350 ಕೋಟಿ ಹಣಕಾಸು ಕೊಡಲು ಸಾಧ್ಯವಿಲ್ಲದ ಕಾರಣ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವಂತೆ ರಾಜ್ಯ ಸರಕಾರದ ಕ್ಯಾಬಿನೆಟ್ ಉಪ ಸಮಿತಿ ಕೊಟ್ಟ ವರದಿ, ವಿವಿಗಳನ್ನು ಮುಚ್ಚುವ ಸರಕಾರದ ತೀರ್ಮಾನ ಅವೈಜ್ಞಾನಿಕ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದು ಅವಿವೇಕತನದ ನಿರ್ಧಾರ ಎಂದರು.

ಇದರ ವಿರುದ್ಧ ರಾಜಕೀಯೇತರ ನೆಲೆಯಿಂದ ಹೋರಾಟ ಮಾಡಬೇಕಿದೆ. ವಿದ್ಯಾರ್ಥಿ ಪರಿಷತ್ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಬಿಜೆಪಿಯ ನಾವು ಕೂಡ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಡಲಿದ್ದೇವೆ. ಗ್ರಾಮೀಣ ಭಾಗದಲ್ಲಿ ಬಡವರ ಭವಿಷ್ಯ ರೂಪಿಸುವ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು. ದೊಡ್ಡ ಮಟ್ಟದ ಹೋರಾಟ ಮಾಡಲಿದ್ದೇವೆ ಎಂದು ಪ್ರಕಟಿಸಿದರು.

ಒಂದು ಜಿಲ್ಲೆ ಒಂದು ವಿವಿ ಪರಿಕಲ್ಪನೆಯಡಿ ಈ ವಿವಿಗಳನ್ನು ರಚಿಸಲಾಗಿದೆ. ಹಣಕಾಸಿನ ಬಿಕ್ಕಟ್ಟನ್ನೇ ಆಧಾರವಾಗಿ ಇಟ್ಟುಕೊಂಡು ರಾಜ್ಯ ಸರಕಾರ ಅವಿವೇಕತನದ ನಿರ್ಧಾರ ತೆಗೆದುಕೊಳ್ಳಬಾರದು. ಆ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
 
 
                                                       
 
   
 

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಅಪಘಾತ ಆಗಿದ್ದರಿಂದ ಗೃಹಲಕ್ಷ್ಮಿ ಹಣ ಲೇಟ್ ಆಯ್ತು: ಲಕ್ಷ್ಮೀ ಹೆಬ್ಬಾಳ್ಕರ್