Publish Date: Fri, 21 Feb 2025 (16:56 IST)
Updated Date: Fri, 21 Feb 2025 (16:59 IST)
ಬೆಂಗಳೂರು: ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ ಎನ್ನುವ ಮೂಲಕ ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಸಖತ್ ಪಂಚ್ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಈ ಬಾರಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದಾಗ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಸಿಎಂ ಕುರ್ಚಿಗಾಗಿ ಫೈಟ್ ನಡೆದಿತ್ತು. ಅಂತಿಮವಾಗಿ ಹೈಕಮಾಂಡ್ ಸಿದ್ದರಾಮಯ್ಯಗೆ ಮಣೆ ಹಾಕಿತ್ತು.
ಆದರೆ ಈ ಫೈಟ್ ಈಗಲೂ ನಿಂತಿಲ್ಲ. ಒಳಗೊಳಗೇ ಎರಡೂ ನಾಯಕರ ಪರವಾಗಿರುವ ಶಾಸಕರು ಈ ಗಾಯವನ್ನು ಕೆದಕುತ್ತಲೇ ಇರುತ್ತಾರೆ. ಸಿದ್ದರಾಮಯ್ಯನೇ ಐದೂ ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಅವರ ಪರ ಇರುವ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಇದಲ್ಲದೆ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಅವರೇ ಮುಖ್ಯಮಂತ್ರಿಯಾಗಲಿ ಎನ್ನುವವರೂ ಇದ್ದಾರೆ.
ಇದು ಡಿಕೆ ಶಿವಕುಮಾರ್ ಒಳಗೊಳಗೇ ಕುದಿಯುವಂತೆ ಮಾಡಿದೆ. ಇಷ್ಟು ದಿನ ಸಿಎಂ ಪಟ್ಟದ ಬಗ್ಗೆ ಮೌನವಾಗಿದ್ದ ಡಿಕೆಶಿ ಈಗ ಇದೇ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಹಲವರು ಅವರ ಹೆಸರು ಹೇಳಿ ಘೋಷಣೆ ಕೂಗಿದರು. ಈ ವೇಳೆ ಅವರು ಮುಂದೆ ನನ್ನ ನಾಯಕತ್ವದಲ್ಲೇ ಚುನಾವಣೆ ನಡೆದಾಗ ಈ ಘೋಷಣೆ ಕೂಗಿ. ಮುಂದೆ 8-10 ವರ್ಷ ಗಟ್ಟಿಯಾಗಿ ನಾನು ಇಲ್ಲೇ ಇರುತ್ತೇನೆ ಎಂದಿದ್ದಾರೆ. ಅವರ ಈ ಹೇಳಿಕೆ ಮುಂದಿನ ಚುನಾವಣೆಯಲ್ಲಿ ತಾವೇ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಎಂದು ಪರೋಕ್ಷವಾಗಿ ಸಾರಿದಂತಾಗಿದೆ.