Select Your Language

Notifications

webdunia
webdunia
webdunia
webdunia

ಕರಾವಳಿ ಮೇಲೆ ಡಿಕೆ ಶಿವಕುಮಾರ್: ಬಿಜೆಪಿ ಭದ್ರಕೋಟೆ ಪಡೆಯಲು ಡಿಕೆಶಿ ಮಾಸ್ಟರ್ ಪ್ಲ್ಯಾನ್

DK Shivakumar
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯೆಂದರೆ ಅದು ಬಿಜೆಪಿ ಭದ್ರಕೋಟೆಯಾಗಿತ್ತು. ಆದರೆ ಈಗ ಬಿಜೆಪಿ ಭದ್ರಕೋಟೆ ಮುರಿಯಲು ಸಿಎಂ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಬೇರೆ ಎಲ್ಲಾ ಕಡೆ ಗೆಲುವು ಸಾಧಿಸುತ್ತಿದ್ದರೂ ಕರಾವಳಿ ಭಾಗದಲ್ಲಿ ಕೈ ಮೇಲುಗೈ ಸಾಧಿಸಲು ಕಷ್ಟವಾಗುತ್ತಿದೆ. ಜನಾರ್ಧನ ಪೂಜಾರಿಯಂತಹ ಹಿರಿಯ ನಾಯಕರು ತೆರೆ ಮರೆಗೆ ಸರಿದ ನಂತರ ಕರಾವಳಿಯಲ್ಲಿ ಕಾಂಗ್ರೆಸ್ ಗೆಲುವು ಕಷ್ಟವಾಗಿದೆ.

ಆದರೆ ಈಗ ಡಿಕೆ ಶಿವಕುಮಾರ್ ಅವರ ಕೆಲವೊಂದು ನಡೆಗಳು, ನಿರ್ಧಾರಗಳನ್ನು ನೋಡಿದರೆ ಕರಾವಳಿಯಲ್ಲಿ ಕೈ ಬಲಪಡಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಬಿಜೆಪಿಯ ಭದ್ರಕೋಟೆಯಾಗಿದ್ದ ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಅಶೋಕ್ ಕುಮಾರ್ ರೈ ಸಕ್ರಿಯರಾಗಿದ್ದು, ಇನ್ನೊಂದು ಅವಧಿಗೂ ಕಾಂಗ್ರೆಸ್ ಬರುವುದು ಗ್ಯಾರಂಟಿ ಎನ್ನುವಂತಾಗಿದೆ.

ಇತ್ತ ಮಂಗಳೂರು ಭಾಗದಲ್ಲೂ ಯುವ ನಾಯಕ ಮಿಥುನ್ ರೈ ಮೂಲಕ ಡಿಕೆ ಶಿವಕುಮಾರ್ ಕಾಂಗ್ರೆಸ್ ಬಲವರ್ಧನೆಗೆ ಯೋಜನೆ ಹಾಕಿಕೊಂಡಿದ್ದಾರೆ. ಜೊತೆಗೆ ಕರಾವಳಿ ಮೂಲದವರಾದ ಯುಟಿ ಖಾದರ್ ಗೆ ಈ ಬಾರಿ ಸಚಿವ ಸ್ಥಾನ ನೀಡಲಾಗಿದೆ. ಇತ್ತೀಚೆಗೆ ಮಂಗಳೂರಿನಲ್ಲೇ ಸಂಪುಟ ಸಭೆ ನಡೆಸುವುದಾಗಿ ಸಿಎಂ ಘೋಷಿಸಿದ್ದಾರೆ. ಜೊತೆಗೆ ಜನಪ್ರಿಯ ನಟರಾದ ರಿಷಬ್ ಶೆಟ್ಟಿಯವರನ್ನು ಕರಾವಳಿಯ ಬ್ರ್ಯಾಂಡ್ ಅಂಬಾಸಿಡರ್ ಮಾಡಿದ್ದಾರೆ.

ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಈಗ ಕರಾವಳಿಯ ಜನಪ್ರಿಯ ಕ್ರೀಡೆಯಾದ ಕಂಬಳಕ್ಕೆ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ. ಈ ಬಾರಿ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಕರಾವಳಿ ಕಂಬಳ ಕ್ರೀಡೆ ಆಯೋಜಿಸಲು ಸ್ವತಃ ಸಿಎಂ ಡಿಕೆಶಿ ಮುಂದಾಗಿದ್ದಾರೆ. ಇದಕ್ಕಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಗೆ ಜವಾಬ್ಧಾರಿ ವಹಿಸಿದ್ದಾರೆ.

ಕರಾವಳಿಯ ಜನ ಸಂಸ್ಕೃತಿ, ಕಲೆ ಎಂದರೆ ಅಪಾರ ಗೌರವವಿಟ್ಟುಕೊಂಡಿದ್ದಾರೆ. ಇಲ್ಲಿನ ಜನ ದೇವರು, ದೈವ, ಸಾಂಪ್ರದಾಯಿಕ ಆಚರಣೆಗಳ ಮೇಲೆ ಅಪಾರ ಶ್ರದ್ಧೆಯಿಟ್ಟುಕೊಂಡಿದ್ದಾರೆ. ಇದುವರೆಗೆ ಕಾಂಗ್ರೆಸ್ ಇಂತಹ ಹಿಂದೂಗಳ ಆಚರಣೆಗೆ ಪ್ರೋತ್ಸಾಹ ಕೊಡಲ್ಲ ಎಂಬ ಭಾವನೆ ಇಲ್ಲಿನ ಜನರಿಗಿತ್ತು. ಆದರೆ ಡಿಕೆ ಶಿವಕುಮಾರ್ ಕರಾವಳಿಯವರ ಈ ಆಚರಣೆಗಳಿಗೆ ಪ್ರೋತ್ಸಾಹ ಕೊಡುವ ಮೂಲಕ ಪಕ್ಷದ ಬಗ್ಗೆ ಜನರಲ್ಲಿ ಸಕಾರಾತ್ಮಕ ಭಾವನೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಈ ಮಾಸ್ಟರ್ ಪ್ಲ್ಯಾನ್ ಗೆ ಸ್ಥಳೀಯ ಬಿಜೆಪಿ ನಾಯಕರು ಯಾವ ರೀತಿ ಕೌಂಟರ್ ಕೊಡುತ್ತಾರೆ ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾಮೀನು ನಿರಾಕರಣೆ ಆದೇಶ ಮಾರ್ಪಾಡು ಕೋರಿ ಮತ್ತೆ ಸುಪ್ರೀಂ ಮೆಟ್ಟಿಲೇರಿದ ನಟ ದರ್ಶನ್‌