Publish Date: Tue, 25 Mar 2025 (09:47 IST)
Updated Date: Tue, 25 Mar 2025 (09:50 IST)
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿರುವ ಮುಸ್ಲಿಮರ ಮೀಸಲಾತಿಗಾಗಿ ಸಂವಿಧಾನ ಬದಲಾವಣೆ ಹೇಳಿಕೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಟೀಕೆ ಎದುರಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಸಂವಾದ ಕಾರ್ಯಕ್ರಮವೊಂದರಲ್ಲಿ ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ್ದರು. ಈ ವೇಳೆ ಮುಂದಿನ ದಿನಗಳಲ್ಲಿ ಮುಸ್ಲಿಮರ ಮೀಸಲಾತಿಗಾಗಿ ಸಂವಿಧಾನವೂ ಬದಲಾಗುತ್ತದೆ ಎಂದು ಹೇಳಿಕೆ ನೀಡಿದ್ದ ವಿಡಿಯೋವನ್ನು ಬಿಜೆಪಿ ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿತ್ತು.
ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಮೇಲೆ ಅಸಮಾಧಾನ ಸ್ಪೋಟಗೊಂಡಿದೆ. ಇದೀಗ ಡಿಕೆಶಿ ಬಗ್ಗೆ ಬಿಜೆಪಿ ಪ್ರತಿಭಟನೆಗಿಳಿದಿದೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಡಿಕೆ ಶಿವಕುಮಾರ್ ಹೇಳಿಕೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಕೆಲವರು ಕಳೆದ ಕೆಲವು ದಿನಗಳ ಹಿಂದೆ ಡಿಕೆಶಿ ನಾನು ಹಿಂದೂ ಧರ್ಮಕ್ಕೆ ಸೇರಿದವನು ಎಂದಿದ್ದು, ಕುಂಭಮೇಳದಲ್ಲಿ ಭಾಗಿಯಾಗಿದ್ದು ಹಾಗೂ ಇತ್ತೀಚೆಗಿನ ಟೆಂಪಲ್ ರನ್ ಉಲ್ಲೇಖಿಸಿ ಅದೆಲ್ಲವೂ ಹಾಗಿದ್ದರೆ ವೋಟ್ ಗಾಗಿ ಮಾಡುತ್ತಿರುವ ನಾಟಕವಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ. ಹಿಂದೂ ಎಂದು ಬಾಯಲ್ಲಿ ಹೇಳಿಕೊಂಡರೆ ಸಾಲದು, ವೋಟ್ ವಿಚಾರಕ್ಕೆ ಬಂದರೆ ಮುಸ್ಲಿಮರ ಓಲೈಕೆ ಮಾಡುವುದು ಯಾಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.