ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ವಿಚಾರವಾಗಿ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಸಂವಿಧಾನವೂ ಬದಲಾಗುತ್ತದೆ ಎಂಬ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂವಾದ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್, ಮುಸ್ಲಿಮರಿಗೆ ಕರ್ನಾಟಕದಲ್ಲಿ ಮೀಸಲಾತಿ ನೀಡಿರುವ ವಿಚಾರದ ಬಗ್ಗೆ ಮಾತನಾಡುತ್ತಾರೆ. ನಿರೂಪಕರು, ಈಗ ಇರುವ ಟೀಕೆ ಏನೆಂದರೆ ನೀವು ಧರ್ಮ ಆಧಾರಿತವಾಗಿ ಮೀಸಲಾತಿ ನೀಡಿರುವುದು. ಧರ್ಮ ಆಧಾರಿತವಾಗಿ ಮೀಸಲಾತಿ ನೀಡುವುದು ಸಂವಿಧಾನದಲ್ಲಿ ಇಲ್ಲ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸುವ ಡಿಕೆ ಶಿವಕುಮಾರ್ ಎಲ್ಲವೂ ಬದಲಾಗುತ್ತದೆ ನೋಡ್ತಿರಿ. ಸಂವಿಧಾನವೂ ಬದಲಾಗುತ್ತದೆ. ಈಗ ಎಷ್ಟೋ ಜನ ಕೋರ್ಟ್ ಗೆ ಹೋಗ್ತಾರೆ. ಈ ವಿಚಾರದ ಬಗ್ಗೆ ಕೋರ್ಟ್ ತೀರ್ಪು ನೀಡುತ್ತದೆ. ಮುಂದೆ ಸಂವಿಧಾನವೂ ಅದಕ್ಕೆ ತಕ್ಕಂತೆ ಬದಲಾಗುತ್ತದೆ ಎಂದಿದ್ದಾರೆ.
ಅವರ ಈ ಹೇಳಿಕೆ ಬಗ್ಗೆ ಬಿಜೆಪಿ ತೀವ್ರ ಟೀಕೆ ಮಾಡಿದೆ. ತನ್ನ ಸೋಷಿಯಲ್ ಮೀಡಿಯಾದಲ್ಲಿ ಡಿಕೆಶಿ ಹೇಳಿಕೆಯ ವಿಡಿಯೋ ಪ್ರಕಟಿಸಿರುವ ಬಿಜೆಪಿ, ಇವರ ಮುಸ್ಲಿಂ ಓಲೈಕೆ ಎಲ್ಲಿಯವರೆಗೆ ತಲುಪಿದೆ ನೋಡಿ ಎಂದಿದೆ. ಅಷ್ಟೇ ಅಲ್ಲ, ಇಂದು ಡಿಕೆಶಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ.