Publish Date: Sat, 22 Mar 2025 (10:09 IST)
Updated Date: Sat, 22 Mar 2025 (10:21 IST)
ಬೆಂಗಳೂರು: ವಿಧಾನಸಭೆಯಲ್ಲಿ ಸ್ಪೀಕರ್ ವಿರುದ್ಧ ಸಿಡಿದೆದ್ದ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿತ್ತು. ಈ ಗದ್ದಲದ ನಡುವೆ ಇದೀಗ ಬೆಂಗಳೂರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಆಗಮಿಸಿದ್ದಾರೆ.
ಸ್ಪೀಕರ್ ಶಾಸಕರನ್ನು ಅಮಾನತು ಮಾಡಿರುವುದಕ್ಕೆ ಬಿಜೆಪಿ ಸಿಡಿದೆದ್ದಿದೆ. ಇದರ ವಿರುದ್ಧ ಹೈಕೋರ್ಟ್ ಗೆ ಹೋಗುವುದಾಗಿ ಹೇಳಿದೆ. ಒಂದು ವೇಳೆ ಸ್ಪೀಕರ್ ತಮ್ಮ ನಿರ್ಧಾರ ಹಿಂಪಡೆಯದೇ ಇದ್ದರೆ ನಾವು ಯಾರೂ ಅಧಿವೇಶನದಲ್ಲಿ ಭಾಗಿಯಾಗಲ್ಲ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.
ಬಿಜೆಪಿಯ ಈ ಗೊಂದಲಗಳ ನಡುವೆ ಇಂದು ರಾಜ್ಯಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸಿದ್ದಾರೆ. ಬಿಜೆಪಿಯ ಮುಂದಿನ ನಡೆಯೇನು ಮತ್ತು ಸದ್ಯದ ಪರಿಸ್ಥಿತಿಗಳೇನು ಎಂಬ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಜೊತೆ ರಾಜ್ಯ ಬಿಜೆಪಿ ನಾಯಕರು ಚರ್ಚೆ ನಡೆಸುವ ಸಾಧ್ಯತೆಯಿದೆ.
ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಪ್ರಕರಣ ಮತ್ತು ಈಗ ಸ್ಪೀಕರ್ ನಡೆ ಬಿಜೆಪಿಗೆ ದೊಡ್ಡ ಅಸ್ತ್ರವಾದಂತಾಗಿದೆ. ಇದನ್ನು ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಹೇಗೆ ಬಳಸಬೇಕು ಎಂಬ ವಿಚಾರವಾಗಿ ಚರ್ಚೆ ನಡೆಸುವ ಸಾಧ್ಯತೆಯಿದೆ.