Publish Date: Mon, 24 Nov 2025 (11:13 IST)
Updated Date: Mon, 24 Nov 2025 (11:15 IST)
ಬೆಂಗಳೂರು: ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಫೈಟ್ ನಡುವೆ ಡಿಕೆ ಶಿವಕುಮಾರ್ ಬಣ ಮತ್ತೊಂದು ಪವರ್ ಫುಲ್ ಐಡಿಯಾ ಮಾಡಿದೆ ಎನ್ನಲಾಗುತ್ತಿದೆ.
ಮಲ್ಲಿಕಾರ್ಜುನ ಖರ್ಗೆ ಇಂದು ರಾಜ್ಯ ನಾಯಕರ ಸಂದೇಶ ಹೊತ್ತು ದೆಹಲಿಗೆ ಮರಳಲಿದ್ದಾರೆ. ನಾಳೆ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯದ ಪ್ರಸ್ತುತ ವಿದ್ಯಮಾನಗಳ ಬಗ್ಗೆ ವಿವರಣೆ ನೀಡಲಿದ್ದಾರೆ. ಇದೀಗ ರಾಹುಲ್ ಗಾಂಧಿಯೇ ನೇರವಾಗಿ ರಾಜ್ಯದ ನಾಯಕತ್ವ ವಿವಾದ ಬಗೆಹರಿಸಲು ಮುಂದಾಗಲಿದ್ದಾರೆ.
ಇದರ ನಡುವೆ ಸಿಎಂ ಹುದ್ದೆಗಾಗಿ ಪಟ್ಟು ಹಿಡಿದಿರುವ ಡಿಕೆಶಿ ಬಣ ಹೊಸ ದಾಳ ಉರುಳಿಸಿದೆ. ಹೊಸ ಶಾಸಕಾಂಗ ನಾಯಕನ ಆಯ್ಕೆಯಾಗಲೇ ಬೇಕು. ಅಧಿಕಾರ ಹಂಚಿಕೆ ಈ ಮೊದಲೇ ಒಪ್ಪಂದವಾದಂತೆ ನಡೆಯಲೇಬೇಕು. ಅದಕ್ಕಾಗಿ ಗೌಪ್ಯ ಮತದಾನವಾಗಲಿ ಎಂದು ಬೇಡಿಕೆ ಮುಂದಿಟ್ಟಿದೆ ಎನ್ನಲಾಗಿದೆ.
ಇಂದು ಡಿಕೆಶಿ ಬೆಂಬಲಿತ ಮತ್ತೊಂದು ಬಣ ದೆಹಲಿಗೆ ತೆರಳಿದೆ. ಗೌಪ್ಯ ಮತದಾನದ ಮೂಲಕ ಶಾಸಕರ ಬೆಂಬಲ ಪಡೆಯಲು ಡಿಕೆಶಿ ಬಣ ಮುಂದಾಗಿದೆ. ಇದರಿಂದ ಹೆಚ್ಚು ಶಾಸಕರ ಬೆಂಬಲ ಸಿಗಬಹುದು ಎಂಬ ನಿರೀಕ್ಷೆ ಡಿಕೆಶಿ ಬಣದ್ದು. ಡಿಕೆಶಿಗೆ ಹೆಚ್ಚು ಬಣದ ಶಾಸಕರ ಬೆಂಬಲ ಸಿಕ್ಕರೆ ಅನಿವಾರ್ಯವಾಗಿ ಸಿಎಂ ಬದಲಾವಣೆ ಮಾಡಬೇಕಾಗಬಹುದು. ಇದು ಸದ್ಯದ ಲೆಕ್ಕಾಚಾರವೆನ್ನಲಾಗುತ್ತಿದೆ.