Publish Date: Sat, 03 Aug 2024 (15:35 IST)
Updated Date: Sat, 03 Aug 2024 (15:38 IST)
ಬೆಂಗಳೂರು: ಬಿಜೆಪಿ-ಜೆಡಿಎಸ್ ಪಕ್ಷ ನಡೆಸುತ್ತಿರುವ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಜನಾಂದೋಲನ ಸಭೆ ನಡೆಸುತ್ತಿದ್ದು, ಇಂದೂ ಕೂಡಾ ಡಿಕೆ ಶಿವಕುಮಾರ್ ಹೆಲ್ಮೆಟ್ ಇಲ್ಲದೇ ಬೈಕ್ ರೈಡ್ ಮಾಡಿ ಟೀಕೆಗೊಳಗಾಗಿದ್ದಾರೆ.
ನಿನ್ನೆ ಜನಾಂದೋಲನ ಸಭೆಯ ಉದ್ಘಾಟನೆಗೆ ಮುನ್ನ ಪಕ್ಷದ ನಾಯಕರು, ಕಾರ್ಯಕರ್ತರೊಂದಿಗೆ ಡಿಕೆ ಶಿವಕುಮಾರ್ ಬೈಕ್ ರೈಡ್ ನಡೆಸಿದ್ದರು. ಈ ವೇಳೆ ಡಿಕೆಶಿ ಸೇರಿದಂತೆ ಯಾರೊಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಟ್ರಾಫಿಕ್ ನಿಯಮಗಳು ಜನಸಮಾನಾ್ಯರಿಗೆ ಮಾತ್ರವೇ ಎಂದು ಹಲವರು ಆಕ್ರೋಶ ಹೊರಹಾಕಿದ್ದರು.
ಆದರೆ ಈ ಬಗ್ಗೆ ಟೀಕೆಗಳಿಗೂ ಡಿಕೆಶಿ ಡೋಂಟ್ ಕೇರ್ ಎಂದಿದ್ದಾರೆ. ಇಂದೂ ಜನಾಂದೋಲನ ಹೋರಾಟದ ನಿಮಿತ್ತ ಕಾಂಗ್ರೆಸ್ ವತಿಯಿಂದ ರಾಮನಗರದಲ್ಲಿ ಬೈಕ್ ರಾಲಿ ಹಮ್ಮಿಕೊಳ್ಳಲಾಗಿತ್ತು. ಈ ಬೈಕ್ ರಾಲಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಡಿಕೆ ಶಿವಕುಮಾರ್ ಕೂಡಾ ಭಾಗಿಯಾಗಿದ್ದರು.
ಇಂದೂ ಕೂಡಾ ಅವರು ಬೈಕ್ ರಾಲಿ ವೇಳೆ ಹೆಲ್ಮೆಟ್ ಧರಿಸದೇ ಪ್ರಯಾಣಿಸಿದ್ದಾರೆ. ಡಿಕೆಶಿ ಮಾತ್ರವಲ್ಲದೇ ಎಲ್ಲಾ ಕಾರ್ಯಕರ್ತರೂ ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಮಾಡುವುದು ಕಂಡುಬಂದಿದೆ. ಇದನ್ನು ನೋಡಿ ಸಾರ್ವಜನಿಕರು ಈ ಜನ ನಾಯಕರಿಗೂ ದಂಡ ಹಾಕಿ ಎಂದು ಟ್ರಾಫಿಕ್ ಪೊಲೀಸರಿಗೆ ಸವಾಲು ಹಾಕಿದ್ದಾರೆ.