Publish Date: Thu, 15 Nov 2018 (13:58 IST)
Updated Date: Thu, 15 Nov 2018 (14:00 IST)
ಬಿಸಿಲೂರು ಖ್ಯಾತಿಯ ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಕುರಿತು ನಿರ್ಮಿತಿ ಕೇಂದ್ರ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೇ ಮಾಡಬೇಕೆಂದು ಆರ್ ಸಿ ಸೂಚನೆ ನೀಡಿದ್ದಾರೆ.
ಕಲಬುರಗಿ ಜಿಲ್ಲಾ ಕ್ರೀಡಾಂಗಣದಲ್ಲಿನ ಎಲ್ಲಾ ಕಾಮಗಾರಿಗಳ ವಸ್ತುಸ್ಥಿತಿ ಬಗ್ಗೆ ವರದಿ ಸಲ್ಲಿಸುವಂತೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಹೆಚ್.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಸುಬೋಧ ಯಾದವ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯ ತಮ್ಮ ಕೊಠಡಿಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಅನುಷ್ಠಾನ ಎಜೆನ್ಸಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ರೀಡಾಂಗಣದಲ್ಲಿ ಯಾವುದೇ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸುವ ಮುನ್ನ ಇದರ ಬಳಕೆದಾರರಾಗಿರುವ ಕ್ರೀಡಾಪಟುಗಳಿಂದ ಅಗತ್ಯ ಸಲಹೆ ಪಡೆದು ಕಾರ್ಯಾನುಷ್ಠಾನ ಮಾಡಿದರೆ ಒಳಿತು ಎಂದರು.
41.98 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಜಾಕೋಜಿ ಹಾಗೂ ಸ್ಪಾ ವೆಲ್ನೆಸ್ ಸೆಂಟರ್ ಕಾಮಗಾರಿಯನ್ನು ಇದೇ ನವೆಂಬರ್ ಮಾಹೆಯ ಅಂತ್ಯದ ವರೆಗೆ ಪೂರ್ಣಗೊಳಿಸಿ ಕ್ರೀಡಾಂಗಣ ಸಮಿತಿಗೆ ಹಸ್ತಾಂತರಿಸಬೇಕು. ಕ್ರೀಡಾಂಗಣದಲ್ಲಿ ನಿರ್ಮಿತಿ ಕೇಂದ್ರದಿಂದ ಕೈಗೊಳ್ಳಲಾದ ಕಾಮಗಾರಿಗಳ ಪೈಕಿ ಸಣ್ಣ ಪುಟ್ಟ ದುರಸ್ತಿಗಳಿದ್ದು, ಅವುಗಳನೆಲ್ಲ ಕೂಡಲೇ ಸರಿಪಡಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸುಬೋಧ ಯಾದವ ನಿರ್ದೇಶನ ನೀಡಿದರು.