Publish Date: Sun, 11 Nov 2018 (19:23 IST)
Updated Date: Sun, 11 Nov 2018 (19:25 IST)
ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ, ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಸುಮಾರು 80 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಎಚ್.ಕೆ.ಆರ್.ಡಿ.ಬಿ.ಯ 2017-18ನೇ ಸಾಲಿನ ಮ್ಯಾಕ್ರೋ ಅನುದಾನದಡಿಯಲ್ಲಿ ಮಹಾನಗರ ಪಾಲಿಕೆಯಿಂದ ಕೈಗೊಳ್ಳಲಾಗಿರುವ 7 ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಾಮಾಜಿಕ ಮತ್ತು ರಾಜಕೀಯ ವಾತಾವರಣದಿಂದ ಒಳ್ಳೆಯ ಸಮಾಜ ನಿರ್ಮಾಣವಾಗಿ ಶಾಂತಿ ನೆಲೆಸುತ್ತದೆ ಕಾರಣ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಈ ಭಾಗದಲ್ಲಿ 371 ಜೆ ಕಲಂ ಜಾರಿಗೆ ಬಂದ ನಂತರ ಕಲಬುರ್ಗಿ ವಿಭಾಗ ತುಂಬಾ ಅಭಿವೃದ್ಧಿಯಾಗುತ್ತಿದೆ. ಈ ಮೊದಲು ಕಲಬುರ್ಗಿ ಎಂದರೆ ಅಧಿಖಾರಿಗಳು ಶಿಕ್ಷೆ ಎಂದು ಭಾವಿಸುತ್ತಿದ್ದರು. ಈಗ ಕಲಬುರಗಿಯು ಹುಬ್ಬಳ್ಳಿ-ಧಾರವಾಡ, ಮೈಸೂರಿಗೆ ಸಮಾನವಾಗಿ ಅಭಿವೃದ್ಧಿಯಾಗುತ್ತಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ಭಾಗದ ಅಭಿವೃದ್ಧಿಗಾಗಿ ಪ್ರತಿ ವರ್ಷ 1500 ಕೋಟಿ ರೂ.ಗಳ ಅನುದಾನ ದೊರೆಯುತ್ತಿದೆ. ಸಾರ್ವಜನಿಕರ ಆಶಯಗಳಿಗೆ ಬದ್ಧರಾಗಿ ಹಾಗೂ ಅವರ ಅಭಿವೃದ್ಧಿಗಾಗಿ ಸದಾ ಕೆಲಸ ನಿರ್ವಹಿಸುವುದಾಗಿ ಹೇಳಿದರು.
ಕಲಬುರ್ಗಿ ಉತ್ತರ ಶಾಸಕಿ ಖನೀಜ ಫಾತಿಮಾ, ಮಹಾನಗರ ಪಾಲಿಕೆ ಮಹಾಪೌರ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಉಪ ಮಹಾಪೌರ ಅಲಿಯಾ ಶಿರೀನ್, ಆಯುಕ್ತ ಪೆದ್ದಪ್ಪಯ್ಯ, ಗಣ್ಯರಾದ ಫರಾಜ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಕಾರ್ಯಕ್ರಮದುದ್ದಕ್ಕೂ ಪಾಲ್ಗೊಂಡಿದ್ದರು.