Publish Date: Sat, 09 Feb 2019 (15:59 IST)
Updated Date: Sat, 09 Feb 2019 (16:02 IST)
ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ಆಪರೇಷನ್ ಕಮಲ ಮೂಲಕ ಗಾಳಹಾಕಲು ಯತ್ನಸಿರುವ ಬಿ.ಎಸ್. ಯಡಿಯೂರಪ್ಪನವರ ಆಡಿಯೋ ಅಸಲಿಯೋ ನಕಲಿಯೋ ಎಂಬುದು ಗೊತ್ತಾಗಲಿದೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಿಲೀಸ್ ಮಾಡಿರುವ ಮಾಜಿ ಸಿಎಂ ಯಡಿಯೂರಪ್ಪನವರ ಆಡಿಯೋ ತುಣುಕನ್ನು ಎಫ್ ಎಸ್ ಎಲ್ ಗೆ ಕಳಿಸಲಾಗುವುದು. ಆಗ ಅದು ಅಸಲಿಯೋ ನಕಲಿಯೋ ಎಂಬುದು ಗೊತ್ತಾಗಲಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಶಾಸಕರಿಗೆ ಹಣದ ಆಮಿಷ ತೋರಿಸಿರುವ ಆಡಿಯೋದ ಪರೀಕ್ಷಾ ವರದಿಯನ್ನು ಎಫ್ ಎಸ್ ಎಲ್ ನೀಡಿದ ಬಳಿಕ ಯಡಿಯೂರಪ್ಪನವರ ಧ್ವನಿ ಅಸಲಿಯೋ ನಕಲಿಯೋ ಎಂಬುದು ಗೊತ್ತಾಗಲಿದೆ ಎಂದು ಹುಬ್ಬಳ್ಳಿಯಲ್ಲಿ ಹೇಳಿದರು.
ವಿಧಾನಸಭಾಧ್ಯಕ್ಷರಾಗಿರುವ ರಮೇಶ್ ಕುಮಾರ್ ಅವರ ಹೆಸರು ಆಡಿಯೋದಲ್ಲಿ ಪ್ರಸ್ತಾಪವಾಗಿದೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿಸಲು ನಿರಂತರವಾಗಿ ಪ್ರಯತ್ನಗಳು ಮುಂದುವರಿದಿವೆ ಎಂದು ದೂರಿದರು. ಕೆಲವು ಶಾಸಕರು ಸದನಕ್ಕೆ ಗೈರು ಹಾಜರಾದರೂ ಸಹ ಬಜೆಟ್ ಅನುಮೋದನೆಗೆ ಯಾವುದೇ ತೊಂದರೆ ಆಗುವುದಿಲ್ಲ. ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದರು.