Publish Date: Fri, 23 Dec 2022 (07:21 IST)
Updated Date: Thu, 22 Dec 2022 (22:25 IST)
ನವದೆಹಲಿ : ಚೀನಾ-ಭಾರತ ಗಡಿ ವಿಚಾರವಾಗಿ ರಾಜ್ಯಸಭೆಯಲ್ಲಿ ಇಂದು ಕಾಂಗ್ರೆಸ್ ನಡೆಸಿದ ಧರಣಿಯನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿಪಕ್ಷ ಕಾಂಗ್ರೆಸ್ ಸದನ ಪೀಠಕ್ಕೆ ಅಗೌರವ ತೋರುವ ರೀತಿ ನಡೆದುಕೊಳ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಂಸತ್ತಿನಲ್ಲಿ ಸೂಕ್ಷ್ಮ ವಿಷಯಗಳ ಚರ್ಚೆ ನಡೆಯದ ಹಲವು ನಿದರ್ಶನಗಳು ನಮ್ಮ ಮುಂದಿವೆ. ಪ್ರತಿಪಕ್ಷದ ಸರ್ಕಾರದ ಅವಧಿಯಲ್ಲೂ ಇಂತಹ ಆಚರಣೆಯನ್ನು ಕಂಡಿದ್ದೇವೆ. ಸ್ವತಃ ರಾಜ್ಯಸಭೆ ಸಭಾಪತಿಯವರು ಸಂಧಾನಕ್ಕೆ ಕರೆದರೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬರಲು ಒಪ್ಪಲಿಲ್ಲ.
ರಾಜ್ಯಸಭೆ ಪೀಠದಿಂದ ಏನೇ ನಿರ್ದೇಶನಗಳು ಬಂದರೂ ಅದನ್ನ ಉಲ್ಲಂಘಿಸಬೇಕು ಎಂಬ ನಿರ್ಧಾರ ಪ್ರತಿಪಕ್ಷಗಳು ಮಾಡಿದಂತಿದೆ. ಈ ರೀತಿಯ ನಡವಳಿಕೆ ಸದನದಲ್ಲಿ ತೋರುವುದು ಖರ್ಗೆಯವರಿಗೆ ಸರಿಯಾದುದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.