Publish Date: Tue, 25 Mar 2025 (11:07 IST)
Updated Date: Tue, 25 Mar 2025 (11:09 IST)
ಮಂಡ್ಯ: ಮಂಡ್ಯದವರು ಛತ್ರಿಗಳು ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಇಂದು ಜನರಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಕ್ಷಮೆ ಕೇಳಿಲ್ಲ ಎನ್ನುವ ಕಾರಣಕ್ಕೆ ಪ್ರತಿಭಟನೆ ನಡೆಯಲಿದೆ.
ಇತ್ತೀಚೆಗೆ ಯೂತ್ ಕಾಂಗ್ರೆಸ್ ಪದಗ್ರಹಣ ಕಾರ್ಯಕ್ರಮವೊಂದರಲ್ಲಿ ಡಿಕೆ ಶಿವಕುಮಾರ್ ಮಂಡ್ಯದವರು ಛತ್ರಿಗಳು ಎಂದಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಇದರ ವಿರುದ್ಧ ಬಿಜೆಪಿ, ಮಂಡ್ಯದ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಡಿಕೆಶಿ ಹೇಳಿಕೆಗೆ ಸಿಡಿದೆದ್ದ ಮಂಡ್ಯ ಜನ ಕ್ಷಮೆ ಕೇಳಲು ಡೆಡ್ ಲೈನ್ ಕೂಡಾ ನೀಡಿದ್ದರು. ಆದರೆ ಇದುವರೆಗೆ ಡಿಕೆ ಶಿವಕುಮಾರ್ ತಮ್ಮ ಹೇಳಿಕೆಗೆ ಕ್ಷಮೆಯನ್ನೇ ಕೇಳಿಲ್ಲ. ಬದಲಾಗಿ ನಾನು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಇದೀಗ ಡಿಕೆಶಿ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದು ಇಂದು ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮಂಡ್ಯದಲ್ಲಿ ಇಂದು ಮನೆ ಮನೆಯಿಂದ ಛತ್ರಿ ತಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದಕ್ಕೀಗ ಡಿಕೆಶಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ನೋಡಬೇಕು.