Publish Date: Mon, 26 Nov 2018 (16:34 IST)
Updated Date: Mon, 26 Nov 2018 (16:36 IST)
ಜಾತ್ರೆ ಅಂದ್ರೆ ಪಲ್ಲಕ್ಕಿ ಉತ್ಸವ, ತೇರು, ತುಲಾಭಾರ ನಡೆಯುವುದು ಸಾಮಾನ್ಯ. ಇನ್ನು ಕೆಲವು ಕಡೆ ಕುರಿ, ಕೋಳಿಯನ್ನು ಕಡೆಯುತ್ತಾರೆ. ಆದರೆ ಇಲ್ಲೊಂದು ಕಡೆ ಬೃಹತ್ ಗಾತ್ರದ ಬಲೂನನ್ನು ಆಕಾಸದೆತ್ತರಕ್ಕೆ ಹಾರಿಸುವ ಮೂಲಕ ಜಾತ್ರೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿಯಲ್ಲಿ ಶ್ರೀ ರಾಮನಾಥ ದೇವರ ಜಾತ್ರೆ ಆಕಾಶಕ್ಕೆ ಬಲೂನ್ ಹಾರಿಸುವ ಮೂಲಕ ವಿಶಿಷ್ಟ ವಾಗಿ ನಡೆಯುತ್ತದೆ. ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಆರಂಭವಾಗುವ ಈ ಜಾತ್ರೆಗೆ ಬಲೂನ್ ಜಾತ್ರೆಯೆಂದೇ ಪ್ರಸಿದ್ಧಿ. ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಎರಡು ದಿನಗಳ ಕಾಲ ಊರವರು ಭಕ್ತಿ ಹಾಗೂ ಶ್ರದ್ಧೆಯಿಂದ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮತಮ್ಮ ಮನೆಗಳ ಮುಂದೆ ತೋರಣ ಕಟ್ಟಿ ದೇವರಿಗೆ ವಿಶೇಷ ಪೂಜೆ ಸಲ್ಲಿಸ್ತಾರೆ.
ಹಾಗೆ ಕೊನೆಯ ದಿನ ಬೃಹತ್ ಗಾತ್ರದ ಬಲೂನನ್ನ ಆಗಸಕ್ಕೆ ಹಾರಿ ಬಿಡುವುದು ವಿಶೇಷವಾಗಿದೆ. ಈ ಬಾರಿ 12 ಅಡಿ ಎತ್ತರದ ದೊಡ್ಡದಾದ ಬಲೂನನ್ನ ಹಾರಿ ಬಿಡಲಾಯಿತು.
ಇದು ಅನಾದಿ ಕಾಲದಿಂದ ನಡೆಸಿಕೊಂಡು ಬಂದ ಸಂಪ್ರದಾಯವಾಗಿದೆ. ಆಗಸಕ್ಕೆ ಬಿಡುವ ಈ ಬಲೂನಿಗೆ ಸ್ಥಳೀಯ ಭಾಷೆ ಕೊಂಕಣಿಯಲ್ಲಿ ವಾಪ್ಹರ್ ಎಂದು ಕರೆಯಲಾಗುತ್ತದೆ. ಜಾತ್ರೆಯ ಕೊನೆಯ ದಿನ ಬೆಳಿಗ್ಗೆ ಹಾಗೂ ಸಂಜೆ ಈ ರೀತಿ ಎರಡು ವಾಪ್ಹರನ್ನ ಆಕಾಶಕ್ಕೆ ತೇಲಿ ಬಿಡುತ್ತಾರೆ. ಭಕ್ತರು ಹಾಗೂ ಕುಳಾವಿಗಳು ಸೇರಿ ಬಯಲಿನಲ್ಲಿ ಒಣ ಹುಲ್ಲಿನಿಂದ ಬೆಂಕಿ ಹೊತ್ತಿಸಿ ವಾಪ್ಹರಗೆ ಹೊಗೆ ತುಂಬುತ್ತಾರೆ. ನಂತರ ಬೆಂಕಿ ಉಂಡೆಯನ್ನ ಬುಟ್ಟಿಗೆ ಕಟ್ಟಿ ಆಕಾಶದೆತ್ತರಕ್ಕೆ ಹಾರಿ ಬಿಡುತ್ತಾರೆ. ಭಕ್ತರಿಂದ ಹರಹರ ಮಹಾದೇವ ಉದ್ಘೋಷ ಮುಗಿಲು ಮುಟ್ಟುತ್ತದೆ. ನೆರೆದ ಸಾವಿರಾರು ಜನರು ಈ ಸಂಭ್ರಮವನ್ನ ಕಣ್ಣು ತುಂಬಿಕೊಂಡರು.