Publish Date: Sun, 03 Jul 2022 (18:21 IST)
Updated Date: Sun, 03 Jul 2022 (18:24 IST)
ನಿವೃತ್ತ ಸರ್ಕಾರಿ ನೌಕರರೊಬ್ಬರಿಗೆ ಎಟಿಎಂ ನಲ್ಲಿ ಹಣ ತೆಗೆಯಲು ಸಹಾಯ ಮಾಡಿದ್ದ ವ್ಯಕ್ತಿಯೋರ್ವ ಡೆಬಿಟ್ ಕಾರ್ಡ್ ನ್ನು ಬದಲು ಮಾಡಿ ವೃದ್ಧರ ಖಾತೆಯಿಂದ 8.5 ಲಕ್ಷ ರೂಪಾಯಿ ವಂಚಿಸಿದ್ದಾನೆ.
ಎಂ.ಜಿ ರಾಮಕೃಷ್ಣ ಗೌಡ (60) ಇತ್ತೀಚೆಗಷ್ಟೇ ಎಟಿಎಂ ಕಿಯೋಸ್ಕ್ ಗೆ ಹಣ ತೆಗೆಯಲು ಹೋದಾಗ 8.54 ಲಕ್ಷ ರೂಪಾಯಿ ಇರಬೇಕಿದ್ದ ಹಣದ ಜಾಗದಲ್ಲಿ 529 ರೂಪಾಯಿಗಳಿದ್ದದ್ದನ್ನು ಕಂಡು ಅಘಾತಕ್ಕೊಳಗಾಗಿದ್ದರು.
ಯಲಹಂಕ 4 ನೇ ಬ್ಲಾಕ್ ನ ನಿವಾಸಿಯಾದ ರಾಮಕೃಷ್ಣ ತಕ್ಷಣವೇ ಬ್ಯಾಂಕ್ ನ್ನು ಸಂಪರ್ಕಿಸಿದಾಗ ಅವರ ಬಳಿ ಇರುವ ಡೆಬಿಟ್ ಕಾರ್ಡ್ ಬ್ಯಾಂಕ್ ನಿಂದ ನೀಡಿರುವುದು ಅಲ್ಲ ಎಂಬ ಮಾಹಿತಿಯನ್ನು ಕೇಳಿ ಮತ್ತೂ ಆಘಾತಕ್ಕೊಳಗಾಗಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಖಾತೆಯಿಂದ ಮೇ.21 ರಿಂದ ಜೂ.13 ವರೆಗೆ ಹಲವು ವಹಿವಾಟುಗಳಲ್ಲಿ ಹಣ ತೆಗೆಯಲಾಗಿದೆ ಎಂಬ ಮಾಹಿತಿ ಬ್ಯಾಂಕ್ ನಿಂದ ಬಂದಿತ್ತು.
ಆಗಲೇ ಎಂ.ಜಿ ರಾಮಕೃಷ್ಣ ಗೌಡ ಅವರಿಗೆ ಯಲಹಂಕಾದಲ್ಲಿ ಮೇ.21 ರಂದು ಡೆಬಿಟ್ ಕಾರ್ಡ್ ನ ಹೊಸ ಪಿನ್ ರಚಿಸಲು ತಾವು ಎಟಿಎಂ ಕಿಯೋಸ್ಕ್ ಗೆ ತೆರಳಿದ್ದಾಗ ಸಹಾಯ ಮಾಡಿದ್ದ ವ್ಯಕ್ತಿ ನೆನಪಾಗಿದ್ದ.
ಎಟಿಎಂ ನ ಕಿಯೋಸ್ಕ್ ನಲ್ಲಿ ಎಟಿಎಂ ಡೆಬಿಟ್ ಕಾರ್ಡ್ ನ ಪಿನ್ ರಚಿಸುವ ಪ್ರಕ್ರಿಯೆ ತಿಳಿಯದ ಕಾರಣ, ಅಲ್ಲೇ ಕಿಯೋಸ್ಕ್ ಒಳಭಾಗದಲ್ಲಿದ್ದ ವ್ಯಕ್ತಿಯೋರ್ವನಿಂದ ಸಹಾಯ ಪಡೆದಿದ್ದರು. ವಂಚಕನಾಗಿದ್ದ ಆತ ರಾಮಕೃಷ್ಣ ಗೌಡರಿಗೆ ಪಿನ್ ರಚಿಸುವುದಷ್ಟೇ ಅಲ್ಲದೇ 40,000 ರೂಪಾಯಿ ಹಣ ತೆಗೆಯಲೂ ಸಹಾಯ ಮಾಡಿದ್ದರು.
ಈ ವೇಳೆ ಡೆಬಿಟ್ ಕಾರ್ಡ್ ಹಿಂತಿರುಗಿ ನೀಡುವಾಗ ತನ್ನ ಬಳಿ ಇದ್ದ ಕಾರ್ಡ್ ನ್ನು ನೀಡಿ ಅವರ ಕಾರ್ಡ್ ನ್ನು ತಾನು ಪಡೆದಿದ್ದಾನೆ. ರಾಮಕೃಷ್ಣ ಗೌಡ ಅವರು ಈ ಘಟನೆ ನೆನಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರು ನೀಡಿದ್ದ ದೂರಿನ ಆಧಾರದಲ್ಲಿ ಈಶಾನ್ಯ ಸಿಇಎನ್ ಪೊಲೀಸರು ಅಟ್ಟೂರ್ ಲೇಔಟ್ ನ ನಿವಾಸಿ ಮಲ್ಲಿನಾಥ ಅಂಗಡಿ (32) ಎಂಬಾತನನ್ನು ಬಂಧಿಸಿದ್ದು, ನಾಲ್ಕು ಬಳೆ, ಮೂರು ಉಂಗುರಗಳೂ ಸೇರಿದಂತೆ ತನ್ನ ಕುಟುಂಬ ಸದಸ್ಯರಿಗೆಂದು ಖರೀದಿಸಿದ್ದ ಹಲವು ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.