Publish Date: Sun, 03 Jul 2022 (18:17 IST)
Updated Date: Sun, 03 Jul 2022 (18:20 IST)
ಬೇಡಿಕೆ ಈಡೇರಿಸುವಂತೆ ನೇರ ವೇತನದಡಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಕಳೆದ ಎರಡು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವುದರಿಂದ ನಗರದ ರಸ್ತೆ, ಆಟದ ಮೈದಾನ, ಬಸ್ ನಿಲ್ದಾಣ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ಕಸ ತುಂಬಿಕೊಳ್ಳುತ್ತಿದೆ.
ಸ್ವಚ್ಛತಾ ಕಾರ್ಯ ನಡೆಸುವ ಬಿಬಿಎಂಪಿಯ ಬಹುತೇಕ ಪೌರಕಾರ್ಮಿಕರು ಶುಕ್ರವಾರ ಹಾಗೂ ಶನಿವಾರ ರಸ್ತೆ ಗುಡಿಸುವ ಕಾರ್ಯ ನಡೆಸಿಲ್ಲ. ಹೀಗಾಗಿ, ಎಲ್ಲೆಂದರಲ್ಲಿ ಕಸ ಕಂಡು ಬಂದಿದೆ. ಆದರೆ, ಮನೆ ಮನೆಯಿಂದ ಕಸ ಸಂಗ್ರಹಣೆ ಹಾಗೂ ಮಾರುಕಟ್ಟೆ, ವ್ಯಾಪಾರಿ ಸ್ಥಳದಲ್ಲಿ ಕಸ ವಿಲೇವಾರಿಯಲ್ಲಿ ಭಾರೀ ಪ್ರಮಾಣ ವ್ಯತ್ಯಯ ಕಂಡು ಬರಲಿಲ್ಲ.
ಮನೆ ಮನೆಯಿಂದ ಕಸ ಸಂಗ್ರಹಿಸುವ 5,205 ಆಟೋ ಟಿಪ್ಪರ್ಗಳ ಚಾಲಕರ ಪೈಕಿ 4,945 ಹಾಜರಾಗಿದ್ದಾರೆ. ಆಟೋಗಳಲ್ಲಿ 5,360 ಕಸ ಸಂಗ್ರಹಣೆ ಸಹಾಯಕ ಕಾರ್ಯ ಮಾಡುತ್ತಿದ್ದು, ಅವರಲ್ಲಿ 4,713 ಹಾಜರಾಗಿದ್ದಾರೆ. ಮತ್ತೊಂದೆಡೆ 644ರಲ್ಲಿ 630 ಕಸ ಸಾಗಣೆಯ ಲಾರಿ (ಕಾಂಪ್ಯಾಕ್ಟರ್) ಹಾಜರಾಗಿದ್ದು, ಕಸ ಸಂಗ್ರಹಣೆ ಮತ್ತು ವಿಲೇವಾರಿ ಪೂರ್ಣಗೊಂಡಿದೆ. ನಗರದಲ್ಲಿ 18 ಸಾವಿರ ಪೌರ ಕಾರ್ಮಿಕರಲ್ಲಿ ಶೇ.70 ಕಾರ್ಮಿಕರು ಪ್ರತಿಭಟನೆಯಲ್ಲಿ ತೊಡಗಿದ್ದು, ಕಾಯಂ ಸೇವೆಯ ಕಾರ್ಮಿಕರು ಸೇರಿ 3,615 ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.