ಚಿಕ್ಕಮಗಳೂರು: ಜಾಗದ ಸರ್ವೆ ಮಾಡಲು ಬಂದವರ ಎದುರು ದೈವ ಬಂದಂತೆ ಬೆಂಕಿ ಹಿಡಿದು ನರ್ತಿಸಿದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಕೊಪ್ಪ ತಾಲ್ಲೂಕಿನ ಚಿಕ್ಕನಗುಂಡಿಯಲ್ಲಿ ನಡೆದಿದೆ ಎನ್ನಲಾಗಿದೆ.
ಗ್ರಾಮದ ಸುರೇಶ್ ಹಾಗೂ ಅವರ ಅಣ್ಣ-ತಮ್ಮಂದಿರ ನಡುವೆ ಜಾಗದ ವ್ಯಾಜ್ಯ ಇತ್ತು. ಈ ಸಂಬಂಧ ಅಧಿಕಾರಿಗಳು ಸರ್ವೇ ನಡೆಸಲು ಜಾಗಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಸುರೇಶ್, ದೈವ ನರ್ತಕನ ರೀತಿ ಕೈಯಲ್ಲಿ ಬೆಂಕಿ ಹಿಡಿದು ತೋಟದಲ್ಲಿ ಎದುರು ಬಂದಿದ್ದಾನೆ.
ಇದರಿಂದ ಅಧಿಕಾರಿಗಳು ಶಾಕ್ ಆಗಿದ್ದಾರೆ. ಅಲ್ಲೇ ಇದ್ದ ವ್ಯಕ್ತಿಗಳನ್ನು ಇದನ್ನು ವಿಡಿಯೋ ಮಾಡಿದ್ದಾರೆ.
ತಮ್ಮನ ಹೆಂಡತಿ ರಮ್ಯಾ ಅವರ ಮೇಲೆ ಈ ವೇಳೆ ಸುರೇಶ್ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.