ಬೆಂಗಳೂರು: 1 ನೇ ತರಗತಿಗೆ ಸೇರಲು ಜೂನ್ 1 ಕ್ಕೆ 6 ವರ್ಷ ಕಡ್ಡಾಯ ಎಂಬ ನಿಯಮ ಸಡಿಲಿಕೆಗೆ ರಾಜ್ಯ ಸರ್ಕಾರ ಬಿಲ್ ಕುಲ್ ಒಪ್ಪುತ್ತಿಲ್ಲ. ಆದರೆ ಇದರ ಪರಿಣಾಮ ಎದುರಿಸುತ್ತಿರುವವರು ಮಾತ್ರ ಮುಗ್ದ ಮಕ್ಕಳು.
ಈ ಕಾರಣಕ್ಕೆ ಈಗ ಪೋಷಕರು ಒಂದು ವಿಡಿಯೋ ಅಭಿಯಾನದ ಮೂಲಕ ಸರ್ಕಾರದ ಮತ್ತು ಶಿಕ್ಷಣ ಇಲಾಖೆಯ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಕಡ್ಡಾಯ ನಿಯಮ ಸಡಿಲಿಕೆ ಮಾಡದೇ ಇರುವುದರಿಂದ ಏನೆಲ್ಲಾ ಸಮಸ್ಯೆಯಾಗುತ್ತದೆ ಎಂಬುದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.
1 ನೇ ತರಗತಿಗೆ 6 ವರ್ಷ ಕಡ್ಡಾಯವಾಗಿರಬೇಕು ಎನ್ನುವುದು ಕೇಂದ್ರದ ನಿರ್ಧಾರ. ಆದರೆ ಕೆಲವು ರಾಜ್ಯಗಳು ಈಗಾಗಲೇ ಈ ವರ್ಷದ ಮಟ್ಟಿಗೆ ವಿನಾಯ್ತಿ ನೀಡಿವೆ. ಯಾಕೆಂದರೆ ಈಗಾಗಲೇ ಯುಕೆಜಿ ಮುಗಿಸಿರುವ ಎಷ್ಟೋ ಮಕ್ಕಳಿಗೆ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಸಡಿಲಿಕೆ ಮಾಡಲಾಗಿದೆ.
ಆದರೆ ಕರ್ನಾಟಕ ಸರ್ಕಾರ ಮಾತ್ರ ಈ ವಿಚಾರದಲ್ಲಿ ಬಿಲ್ ಕುಲ್ ರಾಜಿಯಾಗಲು ಸಿದ್ಧವಿಲ್ಲ. ಇದರಿಂದಾಗಿ ಈಗ ಯುಕೆಜಿ ಮುಗಿಸಿ ಕೇವಲ ಒಂದು ದಿನಕ್ಕೆ ವಯೋಮಿತಿ ಕಡಿಮೆಯಾಗುತ್ತಿರುವ ಮಕ್ಕಳೂ ಒಂದನೇ ತರಗತಿ ಸೇರಲು ಇನ್ನೂ ಒಂದು ವರ್ಷ ಕಾಯಬೇಕಾದ ಪರಿಸ್ಥಿತಿಯಿದೆ.
ಕೆಲವು ಶಾಲೆಗಳಲ್ಲಿ ಒಂದನೇ ತರಗತಿಗೆ ದಾಖಲಾತಿ ಮಾಡುತ್ತಿದ್ದಾರೆ. ಆದರೆ ಅದರ ಜೊತೆಗೆ ಇನ್ನೊಂದು ವರ್ಷ ಮತ್ತೆ ಒಂದನೇ ತರಗತಿಯಲ್ಲಿ ಮುಂದುವರಿಯಬೇಕು ಎಂದು ಷರತ್ತು ಹಾಕುತ್ತಿದ್ದಾರೆ. ಇದರಿಂದಾಗಿ ಪೋಷಕರಿಗೆ ಅನಗತ್ಯ ಹೊರೆ. ಜೊತೆಗೆ ಮಕ್ಕಳಿಗೆ ತಮ್ಮ ಜೊತೆಗಿದ್ದ ಮಕ್ಕಳು ಎರಡನೇ ತರಗತಿ ಹೋದರೂ ತಾನು ಮಾತ್ರ ಇದೇ ಕ್ಲಾಸ್ ನಲ್ಲಿ ಉಳಿಯುವಂತಾಗಿದೆ ಎಂಬ ಬೇಸರ ಕಾಡುತ್ತದೆ.
ನಾನು ಯಾಕೆ ನನ್ನ ಫ್ರೆಂಡ್ಸ್ ಜೊತೆ ಮುಂದಿನ ಕ್ಲಾಸ್ ಗೆ ಹೋಗಿಲ್ಲ ಎಂಬ ಪ್ರಶ್ನೆ ಮುಗ್ಧ ಮಕ್ಕಳ ಮನಸ್ಸಿನಲ್ಲಿ ಬರುತ್ತಿದೆ. ಕೆಲವರು ಶಾಲೆಗೇ ಹೋಗದೇ ಒಂದು ವರ್ಷ ಮನೆಯಲ್ಲಿಯೇ ಕಳೆಯಬೇಕಾಗುತ್ತದೆ. ಅಂತಹ ಮಕ್ಕಳು ಎಲ್ಲರಂತೆ ನಾನು ಯಾಕೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಅನುಭವಿಸುತ್ತಾರೆ.
ಇಂತಹ ಸಮಸ್ಯೆ ಈ ವರ್ಷ ಸೇರುವ ಮಕ್ಕಳಿಗೆ ವಿಶೇಷವಾಗಿ ತಟ್ಟಲಿದೆ. ಯಾಕೆಂದರೆ ಈಗಾಗಲೇ ಹೆಚ್ಚಿನ ಶಾಲೆಗಳಲ್ಲಿ ಎಲ್ ಕೆಜಿ ದಾಖಲಾತಿಗೆ ಕಡ್ಡಾಯವಾಗಿ ನಾಲ್ಕು ವರ್ಷ ಮಾಡಿರುತ್ತಾರೆ. ಹೀಗಾಗಿ ಮುಂದೆ ಬರುವ ಮಕ್ಕಳಿಗೆ ಈ ಸಮಸ್ಯೆ ಸ್ವಲ್ಪ ಕಡಿಮೆಯಾಗಬಹುದು. ಹೀಗಾಗಿ ಈ ಒಂದು ವರ್ಷಕ್ಕೆ ವಿನಾಯ್ತಿ ಕೊಡಿ ಎಂಬುದು ಪೋಷಕರ ಆಗ್ರಹವಾಗಿದೆ.