Publish Date: Sun, 23 Jun 2024 (16:57 IST)
Updated Date: Sun, 23 Jun 2024 (17:39 IST)
ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಒಂದು ದಿನ ಕಳೆದಿದ್ದಾರೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮೀಗೆ ಹಲ್ಲೆ ಮಾಡಿದ ಆರೋಪದಲ್ಲಿ ಜೈಲುವಾಸ ಅನುಭವಿಸಿದ ದಾಸ ಇದೀಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ನಿನ್ನೆಯಷ್ಟೇ ಪರಪ್ಪನ ಅಗ್ರಹಾರ ಸೇರಿದ ದರ್ಶನ್ ಅವರು ಸಾಮಾನ್ಯ ಕೈದಿಯಂತೆ ಒಂದು ದಿನವನ್ನು ಕಳೆದಿದ್ದಾರೆ. ಸಂಜೆ ವೇಳೆ ನ್ಯಾಯಾಲಯದಿಂದ ಜೈಲಿಗೆ ಕಳುಹಿಸಿದ ದರ್ಶನ್ ಅವರು ತಡರಾತ್ರಿವರೆಗೂ ಮಂಕಾಗಿ ಕುಳಿತಿದ್ದರು. ಅದಲ್ಲದೆ ಯಾರೊಬ್ಬರ ಜತೆಯೂ ಮಾತನಾಡದೆ, ಮೌನಕ್ಕೆ ಜಾರಿದ್ದರು.
ರಾತ್ರಿ ಜೈಲು ಮೆನುವಿನಂತೆ ಊಟ ಮಾಡಿದ ದರ್ಶನ್ ತಡರಾತ್ರಿ ನಿದ್ದೆಗೆ ಜಾರಿದ್ದಾರೆ. ಇನ್ನೂ ಬೆಳಗ್ಗೆ ಜೈಲಿನ ಮೆನುವಿನ ಪ್ರಕಾರ ಪಲಾವ್ ತಿಂದ ದರ್ಶನ್ ಕಾಫಿಯನ್ನು ಸೇವಿಸಿಲ್ಲ. ಅದಲ್ಲದೆ ದಿನಪತ್ರಿಕೆಯಿದ್ದರೂ, ಹೊರಗಿನ ವಿದ್ಯಮಾನ ತಿಳಿಯಲು ಇಷ್ಟ ಪಡದ ದರ್ಶನ್ ದಿನಪತ್ರಿಕೆ ಓದಿಲ್ಲ.
ಪ್ರಕರಣದ 10ನೇ ಆರೋಪಿ ವಿನಯ್ನನ್ನು ದರ್ಶನ್ ಕೊಠಡಿಯಲ್ಲಿ ಇರಿಸಲಾಗಿದೆ. ಪ್ರಕರಣದಿಂದ ಕುಗ್ಗಿ ಹೋಗಿರುವ ದರ್ಶನ್ ಯಾರೊಂದಿಗೂ ಮಾತನಾಡಿಲ್ಲ. ಕೊಲೆ ಪಶ್ಚಾತ್ತಾಪದಲ್ಲೇ ದಿನ ಕಳೆದಿದ್ದಾರೆ.