Publish Date: Tue, 14 May 2024 (13:13 IST)
Updated Date: Tue, 14 May 2024 (13:16 IST)
Photo Courtesy: Instagram
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರವಾಹಿ ನಾಯಕಿ, ಬಹುಭಾಷಾ ನಟಿ ಛಾಯಾ ಸಿಂಗ್ ಅವರ ಬೆಂಗಳೂರಿನ ಮನೆಯಲ್ಲಿ ಕಳ್ಳತನವಾದ ಬಗ್ಗೆ ವರದಿಯಾಗಿದೆ.
ಛಾಯಾ ಸಿಂಗ್ ತಾಯಿ ಚಮನಲತಾ ನೆಲೆಸಿರುವವ ಬೆಂಗಳೂರಿನ ನಿವಾಸದಲ್ಲಿ ಕಳ್ಳತನವಾಗಿದೆ. ಸ್ವತಃ ಅವರ ಮನೆಯಲ್ಲಿ ಕೆಲಸಕ್ಕಿದ್ದ ಉಷಾ ಎಂಬಾಕೆಯೇ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಮನೆಕೆಲಸದಾಕೆ ಉಷಾ ಸತ್ಯ ಬಾಯ್ಬಿಟ್ಟಿದ್ದಾಳೆ.
ಕಳ್ಳತನ ಮಾಡಿ ಏನೂ ಗೊತ್ತೇ ಇಲ್ಲದಂತೆ ನಟಿಸಿದ್ದಳು. ಆದರೆ ಬಳಿಕ ಛಾಯಾ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾಳೆ. ಬಂಧಿತಳಿಂದ 66 ಗ್ರಾಂ ಚಿನ್ನ, ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮರಳಿ ಛಾಯಾ ಕುಟುಂಬಸ್ಥರಿಗೆ ನೀಡಲಾಗಿದೆ. ಈ ಬಗ್ಗೆ ಬಸವೇಶ್ವರ ನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಛಾಯಾ ಸಿಂಗ್ ಅಮೃತಧಾರೆ ಧಾರವಾಹಿಯಲ್ಲಿ ಭೂಮಿಕಾ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ಇದಕ್ಕೆ ಮೊದಲು ಹಲವು ಸ್ಯಾಂಡಲ್ ವುಡ್ ಮತ್ತು ಪರಭಾಷೆ ಸಿನಿಮಾ, ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ಶಿವರಾಜ್ ಕುಮಾರ್ ಜೊತೆ ಭೈರತಿ ರಣಗಲ್ ಸಿನಿಮಾದಲ್ಲಿ ನಟಿಸಿದ್ದು, ಅದು ಬಿಡುಗಡೆಗೆಯಾಗಬೇಕಿದೆ.