Publish Date: Mon, 13 May 2024 (10:40 IST)
Updated Date: Mon, 13 May 2024 (10:53 IST)
Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಕಾರು ಅಡ್ಡ ಹಾಕಿ ದುಷ್ಕರ್ಮಿಗಳು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ವಿಚಾರವನ್ನು ಅವರು ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವಿವರಿಸಿದ್ದಾರೆ.
ಕೆಲವು ದಿನಗಳ ಮೊದಲು ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ಮೇಲೆ ಇದೇ ರೀತಿ ಹಲ್ಲೆ ಯತ್ನ ನಡೆದಿತ್ತು. ಇದೀಗ ನಟ ಚೇತನ್ ಚಂದ್ರ ಮೇಲೆ ಇದೇ ರೀತಿ ಕಾರಣವಿಲ್ಲದೇ 20 ಜನರ ಗುಂಪು ಹಲ್ಲೆ ನಡೆಸಿದೆ. ಕಗ್ಗಲೀಪುರದಲ್ಲಿ ಘಟನೆ ನಡೆದಿದ್ದು, ತಕ್ಷಣವೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ ಬಳಿಕ ಪಕ್ಕದಲ್ಲಿದ್ದ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಮಾಡಿಸಿಕೊಳ್ಳುವಾಗ ರಕ್ತ ಸಿಕ್ತವಾಗಿದ್ದರೂ ತಮಗಾದ ಹಲ್ಲೆ ಬಗ್ಗೆ ವಿವರಣೆ ನೀಡಿದ್ದಾರೆ. ತಾಯಂದಿರ ದಿನವಾಗಿದ್ದರಿಂದ ಅಮ್ಮನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ವಾಪಸ್ ಬರುವಾಗ ಘಟನೆ ನಡೆದಿದೆ. ಇದು ನನ್ನ ಜೀವನದ ಅತ್ಯಂತ ಕೆಟ್ಟ ಘಟನೆ ಎಂದು ಅವರು ಹೇಳಿದ್ದಾರೆ.
ಯಾರೋ ಚೆನ್ನಾಗಿ ಕುಡಿದಿದ್ದರು, ನನ್ನ ಗಾಡಿ ಅಡ್ಡ ಹಾಕಿದರು. ಹೀಗೆ ಏಕಾಏಕಿ ಬಂದಾಗ ದರೋಡೆ ಮಾಡಲು ಬಂದಿದ್ದು ಎಂದುಕೊಂಡೆ. ಆದರೆ ನೋಡು ನೋಡುತ್ತಾ, 20 ಜನರ ಗುಂಪು ನನ್ನ ಮೇಲೆ ದಾಳಿ ನಡೆಸಿತು. ಅವರು ನನ್ನ ಕಾರು ಅಡ್ಡಹಾಕಿ ಹಾನಿ ಮಾಡಲು ಮುಂದಾದಾಗ ನಾನು ಕಾರಿನಿಂದ ಕೆಳಗೆ ಇಳಿದಿದ್ದೆ. ಆಗ ನನ್ನ ಮೇಲೂ ಹಲ್ಲೆ ಮಾಡಿದರು. ನನ್ನ ಮೂಗಿಗೆ ಏಟಾಗಿದೆ. ತುಂಬಾ ಕೆಟ್ಟ ಜನರು ಎಂದು ಚೇತನ್ ಚಂದ್ರ ಹೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ ಚೇತನ್ ಚಂದ್ರ ಪರಿಸ್ಥಿತಿ ನೋಡಿ ನೆಟ್ಟಿಗರು ಮರುಗಿದ್ದಾರೆ. ಇಂತಹವರನ್ನು ಸುಮ್ಮನೇ ಬಿಡಬಾರದು ಎಂದಿದ್ದಾರೆ. ಸದ್ಯಕ್ಕೆ ಕಗ್ಗಲೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.