ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ಗೆ ಇಂದು 75 ನೇ ಜನ್ಮಜಯಂತಿ. ಈ ಬಾರಿ ಅವರ ಹುಟ್ಟುಹಬ್ಬ ನಾನಾ ಕಾರಣಗಳಿಗೆ ವಿಶೇಷವಾಗಿದೆ. ಈ ದಿನ ಅವರಿಗೆ ನಮನ ಸಲ್ಲಿಸಲು ಅಭಿಮಾನಿಗಳು ಎಲ್ಲಿಗೆ ಬರಬೇಕು ಇಲ್ಲಿದೆ ಮಾಹಿತಿ.
ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನು ಇತ್ತೀಚೆಗಷ್ಟೇ ಕೆಡವಲಾಗಿದೆ. ಇದು ಅಭಿಮಾನಗಳಿಗೆ ಬೇಸರ ತರಿಸಿತ್ತು. ಹೀಗಾಗಿ ಈ ಬಾರಿ ಅವರಿಗೆ ಎಲ್ಲಿ ನಮನ ಸಲ್ಲಿಸಬೇಕು ಎನ್ನುವ ಗೊಂದಲಗಳಿಗೆ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಉತ್ತರ ನೀಡಿದ್ದಾರೆ.
ಅಭಿಮಾನ್ ಸ್ಟುಡಿಯೋ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ವಿಷ್ಣುವರ್ಧನ್ ಗೆ ನಮನ ಸಲ್ಲಿಸಲು ವಿಷ್ಣು ಸೇನಾ ಸಮಿತಿ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ರಕ್ತದಾನ, ಅನ್ನದಾನ, ನೇತ್ರದಾನಕ್ಕೆ ನೋಂದಣಿ ಸೇರಿದಂತೆ ಎಂದಿನಂತೆ ವಿಷ್ಣು ನಮನ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಅಭಿಮಾನ್ ಸ್ಟುಡಿಯೋದಿಂದ ಕೇವಲ 200 ಮೀಟರ್ ದೂರದಲ್ಲಿ 3 ಎಕರೆ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಒಂದು ದಿನದ ಮಟ್ಟಿಗೆ ಈ ಸ್ಥಳದಲ್ಲಿ ಪೊಲೀಸರ ಅನುಮತಿ ಪಡೆದು ಕಾರ್ಯಕ್ರಮ ನಡೆಸಲಾಗುತ್ತಿದೆ. ಬೆಳಿಗ್ಗೆ 6 ರಿಂದ ಸಂಜೆ 6 ವರೆಗೂ ಇಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
ಇನ್ನು, ವಿಷ್ಣುವರ್ಧನ್ ಕುಟುಂಬ ಎಂದಿನಂತೆ ಮೈಸೂರಿನಲ್ಲಿ ಅವರ ಸ್ಮಾರಕದಲ್ಲಿ ಪೂಜೆ ಸಲ್ಲಿಸಲಿದೆ. ಹೀಗಾಗಿ ಇಲ್ಲಿಗೂ ಬಂದು ವಿಷ್ಣುವರ್ಧನ್ ಗೆ ನಮನ ಸಲ್ಲಿಸುವವರು ಸಲ್ಲಿಸಬಹುದಾಗಿದೆ. ಈ ಬಾರಿ ಕರ್ನಾಟಕ ರತ್ನ ಪ್ರಶಸ್ತಿಯೂ ಸಿಕ್ಕಿರುವುದರಿಂದ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ.