ಬೆಂಗಳೂರು: ನಾಳೆ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಜನ್ಮದಿನವಿದ್ದು ಈ ದಿನಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಗಲಿದೆ. ಇಂದು ಸಂಜೆ ಕಿಚ್ಚ ಸುದೀಪ್ ನೇತೃತ್ವದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಯಲಿದೆ.
ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿ ನೆಲಸಮವಾದಾಗ ಎಲ್ಲರಿಗೂ ತೀವ್ರ ಬೇಸರವಾಗಿತ್ತು. ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಇನ್ನು ಯಾರಿಗೂ ಬೇಡುವುದು ಬೇಡ, ನಾವೇ ಅಭಿಮಾನಿಗಳಿಗೆ ನಮನ ಸಲ್ಲಿಸಲು ಒಂದು ಜಾಗ ಮಾಡೋಣ ಎಂದು ವಿಡಿಯೋ ಸಂದೇಶ ನೀಡಿದ್ದರು.
ಅವರು ನುಡಿದಂತೆ ಕೆಲವೇ ದಿನಗಳಲ್ಲಿ ಜಮೀನೊಂದನ್ನು ಖರೀದಿಸಿದ್ದರು. ಅದೇ ಜಾಗದಲ್ಲಿ ಈಗ ವಿಷ್ಣುವರ್ಧನ್ ಅವರ ಪ್ರತಿಮೆ ನಿರ್ಮಾಣವಾಗಲಿದೆ. ಇಲ್ಲಿ ಅಭಿಮಾನಿಗಳು ಬಂದು ನಮನ ಸಲ್ಲಿಸಿ ಹೋಗುವಂತೆ ಸ್ಮಾರಕವೊಂದು ನಿರ್ಮಾಣವಾಗಲಿದೆ.
ಅದರ ನೀಲ ನಕ್ಷೆಯನ್ನು ಕಿಚ್ಚ ಸುದೀಪ್ ನಾಳೆ ಬಿಡುಗಡೆ ಮಾಡಲಿದ್ದಾರೆ. ಇದಕ್ಕಾಗಿ ನಾಳೆ ಸಂಜೆ 5 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಕಿಚ್ಚ ಸುದೀಪ್ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಇದರಲ್ಲಿ ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಕೂಡಾ ಭಾಗಿಯಾಗಲಿದ್ದಾರೆ.