Publish Date: Thu, 05 Dec 2024 (10:09 IST)
Updated Date: Thu, 05 Dec 2024 (10:13 IST)
ನವದೆಹಲಿ: ಚಿಕಿತ್ಸೆ ನೆಪದಲ್ಲಿ ಮತ್ತಷ್ಟು ದಿನ ಮಧ್ಯಂತರ ಜಾಮೀನು ವಿಸ್ತರಿಸಲು ಕೋರ್ಟ್ ಗೆ ಮನವಿ ಸಲ್ಲಿಸಲು ದರ್ಶನ್ ಪರ ವಕೀಲರು ಸಿದ್ಧತೆಯಲ್ಲಿದ್ದರೆ ಇತ್ತ ಪೊಲೀಸರ ಲೆಕ್ಕಾಚಾರವೇ ಬೇರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂಬ ನೆಪ ಹೇಳಿ ಹೈಕೋರ್ಟ್ ನಿಂದ ಆರು ವಾರಗಳ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಕಳೆದ ಒಂದು ತಿಂಗಳಿನಿಂದ ಬಿಜಿಎಸ್ ಆಸ್ಪತ್ರೆಯಲ್ಲಿರುವ ದರ್ಶನ್ ಇದುವರೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಅವರ ಜಾಮೀನು ಅವಧಿ ಮುಗಿಯಲು ಇನ್ನೇನು 10 ದಿನ ಬಾಕಿಯಿದೆಯಷ್ಟೇ.
ಈ ನಡುವೆ ಅವರು ನಾರ್ಮಲ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅದರ ತೀರ್ಪು ಇನ್ನಷ್ಟೇ ಹೊರಬರಬೇಕಿದೆ. ಆದರೆ ಒಂದು ವೇಳೆ ನಾರ್ಮಲ್ ಜಾಮೀನು ಸಿಗದೇ ಇದ್ದರೆ ಚಿಕಿತ್ಸೆ ನೆಪದಲ್ಲಿ ಮಧ್ಯಂತರ ಜಾಮೀನು ವಿಸ್ತರಿಸಲು ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಆದರೆ ಪೊಲೀಸರ ಲೆಕ್ಕಾಚಾರವೇ ಬೇರೆಯಿದೆ. ದರ್ಶನ್ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ ಇದುವರೆಗೆ ದರ್ಶನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಹೀಗಾಗಿ ಇದೇ ಕಾರಣ ನೀಡಿ ಪೊಲೀಸರು ಸುಪ್ರೀಂಕೋರ್ಟ್ ಗೆ ಮಧ್ಯಂತರ ಜಾಮೀನು ರದ್ದುಗೊಳಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ.